ಸುದ್ದಿವಿಜಯ, ಜಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು, ರೈತರ ಸಾಲ ಮನ್ನ ಯೋಜನೆಯನ್ನು ಜನ ಮರೆತಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್ ಬೇರುಗಳು ಇನ್ನು ಘಟ್ಟಿಯಾಗಿವೆ ಎಂದು ಅಭ್ಯರ್ಥಿ ಮಲ್ಲಾಪುರ ದೇವರಾಜ್ ಹೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆ ನಾಲ್ಕು ಜನರ ಮಧ್ಯೆಯಿದೆ. ದೇವೇಗೌಡರು, ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಾಡಿರುವ ಅಭಿವೃದ್ಧಿಯನ್ನು ಜನರು ಎಲ್ಲೆ ಹೋದರು ಸ್ಮರಿಸುತ್ತಾರೆ. ಕ್ಷೇತ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಆರೋಪಿಸಿದರು.
57ಕೆರೆಗಳನ್ನು ತುಂಬಿಸುವ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಅಪ್ಪರ್ ಭದ್ರಾ ರೈತರಿಗೆ ದೂರದ ಬೆಟ್ಟವಾಗಿದೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಜನರು ಗುಳೇ ಹೋಗುತ್ತಿದ್ದಾರೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನುಡಿದಂತೆ ನಡೆದರು. ಕೊಟ್ಟ ಮಾತನ್ನು ಈಡೇರಿಸುತ್ತಾರೆ ಎಂದು ಈಗಲೂ ಜನ ನಂಬಿದ್ದಾರೆ.
ನಾನು ರೈತ ಸಂಘದಲ್ಲಿ ಗುರುತಿಸಿಕೊಂಡು ಈಗ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿದ್ದೇನೆ. ನನ್ನ ಹೋರಾಟದ ಜೊತೆಯಲ್ಲಿದ್ದಾರೆ. ಈ ಬಾರಿ ಜನ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಸಿದ್ದರಾಗಿದ್ದಾರೆ. ನಂಜುಂಡಪ್ಪ ವರದಿ ಆಧಾರದಂತೆ ಹಿಂದುಳಿದ ಬರಪೀಡಿತ ಪ್ರದೇಶವಾಗಿದೆ. ಹರಪನಹಳ್ಳಿ ಕ್ಷೇತ್ರದ 7 ಮತ್ತು ಕ್ಷೇತ್ರದ 22 ಗ್ರಾಪಂಗಳಲ್ಲಿ ಅತ್ಯಂತ ಬರ ಪೀಡಿತ ಪ್ರದೇಶ. ಇಲ್ಲಿಗೆ ಕೈಗಾರಿಕೆಗಳು ಬೇಕು, ವಲಸೆ ಹೋಗುವುದರನ್ನು ತಡೆಯಬೇಕು ಎಂಬ ಉದ್ದೇಶ ನಮ್ಮ ಸರಕಾರದ ಉದ್ದೇಶ.
ಹಿಂದುಳಿದ ಪ್ರದೇಶಕ್ಕೆ ಇಲ್ಲಿನ ರಾಜಕಾರಣಿಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆ ಕಾರಿಡಾರ್ ಬೇಕಾಗಿದೆ. ಕುಮಾರಸ್ವಾಮಿ ಸಿಎಂ ಆದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬುದು ಜನರಿಗೆ ಮನವರಿಕೆಯಾಗಿದೆ. ಈ ಬಾರಿ ಜೆಡಿಎಸ್ ಪಕ್ಷಕ್ಕೆ ಜನ ಮತಹಾಕುತ್ತಾರೆ ಎಂದು ನಾನು ನಂಬಿದ್ದೇನೆ. ಈ ನಿಟ್ಟಿನಲ್ಲಿ ಕ್ಷೇತ್ರದ 165 ಹಳ್ಳಿಗಳಿಗೆ ತೆರಳಿ ಮತಯಾಚೆ ಮಾಡುತ್ತಿದ್ದೇನೆ. ಈ ಬಾರಿ ಜೆಡಿಎಸ್ ಕಿಂಗ್ ಮೇಕರ್ ಆಗುತ್ತದೆ. ಎಚ್ಡಿಕೆ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.