ಸುದ್ದಿವಿಜಯ, ಜಗಳೂರು: ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡಲೆ ಬತ್ತಿನ ಬೀಜ ವಿತರಣೆ ಮಾಡುವಾಗ ಕೃಷಿ ಇಲಾಖೆಯ ಅನುವುಗಾರ ಸಣ್ಣಜ್ಜ ಎಂಬುವರ ಮೇಲೆ ರೈತನೋರ್ವ ಗುರುವಾರ ಹಲ್ಲೆ ಮಾಡಿದ್ದಾನೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಡಲೆ ಬಿತ್ತನೆ ಬೀಜ ಕೊಳ್ಳಲು ಬಂದ ದೊಣೆಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷರ ಪುತ್ರ ಹೊಸಹಟ್ಟಿ ಗ್ರಾಮದ ತಿಪ್ಪೇರುದ್ರ ಎಂಬ ವ್ಯಕ್ತಿ ಅನುವುಗಾರ ಮುಸ್ಟೂರು ಗ್ರಾಮದ ಸಣ್ಣಜ್ಜನ ಮೇಲೆ ಏಕಾ ಏಕಿ ಹಲ್ಲೆ ಮಾಡಿದ್ದಾನೆ.ನೂರಾರು ಜನ ರೈತರು ಏಕಾ ಏಕಿ ಬಿತ್ತನೆ ಬೀಜ ಕೊಳ್ಳಲು ಮುಗಿಬಿದ್ದಿದ್ದರು. ಮೈಮೇಲೆ ಬೀಳಬೇಡಿ ಎಷ್ಟು ಸಮಯವಾದರೂ ಕಡಲೆ ಬೀಜಗಳನ್ನು ಕೊಡುತ್ತೇವೆ. ಪೂರಕ ದಾಖಲೆಗಳನ್ನು ಸರಿಯಾಗಿ ಕೊಟ್ಟು ಸಹಕರಿಸಿ ಕಡಲೆ ಬೀಜ ಖರೀದಿಸಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮನವಿ ಮಾಡಿದರೂ ಕೇಳದೆ ಏಕಾ ಏಕಿ ನನಗೆ, ನಿನಗೆ ಎಂದು ಗೊಂದಲ ಸೃಷ್ಟಿಸಿದ್ದಾರೆ.
ಕಡಲೆ ಪ್ಯಾಕೇಟ್ಗಳನ್ನು ವಿತರಣೆ ಮಾಡುತ್ತಿದ್ದ ಅನುವುಗಾರ ಸಣ್ಣಜ್ಜ ಬಳಿ ಹೋದ ರೈತ ತಿಪ್ಪೇರುದ್ರ ಎನ್ನುವ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಕಪಾಳ, ಬೆನ್ನಿಗೆ ಬಾಸುಂಡೆ ಬರುವಂತೆ ಹಲ್ಲೆ ಮಾಡಿದ್ದಾನೆ ಎಂದು ಸಣ್ಣಜ್ಜ ಆರೋಪ ಮಾಡಿ ನೋವು ತೋಡಿಕೊಂಡರು.
ಸ್ಥಳಕ್ಕೆ ಕೃಷಿ ಇಲಾಖೆ ಎಡಿಎ ಮಿಥುನ್ ಕಿಮಾವತ್, ಎಓ ಬೀರಪ್ಪ ಕೊರವರ ಸೇರಿದಂತೆ ಅನೇಕ ಅಧಿಕಾರಿಗಳು ಭೇಟಿ ನೀರಿ ಅನುವುಗಾರ ಸಣ್ಣಜ್ಜನಿಗೆ ಸಾಂತ್ವನ ಹೇಳಿ ಪರಿಸ್ಥಿತಿ ನಿಯಂತ್ರಿಸಿದರು.