ಸುದ್ದಿವಿಜಯ,
ಜಗಳೂರು: ಆರ್ ಟಿಐ ಸಾಮಾಜಿಕ ಕಾರ್ಯಕರ್ತ ರಾಮಕೃಷ್ಣ ಕೊಲೆ ಆರೋಪದ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿ ಪಿಡಿಓ ಎ.ಟಿ.ನಾಗರಾಜ್ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಓ ಡಾ.ಎ.ಚನ್ನಪ್ಪ ಆದೇಶ ಹೊರಡಿಸಿದ್ದಾರೆ.
ಕೊಲೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುತಿದ್ದಂತೆ ಗುತ್ತಿದುರ್ಗ, ಹಿರೇಮಲ್ಲನಹೊಳೆ ಮತ್ತು ಗುರುಸಿದ್ದಾಪುರ ಇಂಚಾರ್ಜ್ ಆಗಿದ್ದ ಎ.ಟಿ.ನಾಗರಾಜ್ ಅವರನ್ನು ಸೇವೆಯಿಂದ ಅಮಾನತಿನಲ್ಲಿಡಲಾಗಿದೆ. ಅಷ್ಟೇ ಅಲ್ಲ ತಕ್ಷಣದಿಂದ ನ್ಯಾಮತಿ ತಾಲೂಕು ಟಿ.ಗೋಪಗೊಂಡನಹಳ್ಳಿ ಗ್ರಾಮ ಪಂಚಾಯಿತಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.
ಈ ಹಿಂದೆ ಗುರುಸಿದ್ದಾಪುರ ಗ್ರಾಪಂನಲ್ಲಿ ನಡೆದ ಭ್ರಷ್ಟಾಚಾರದ ವಿಚಾರದಲ್ಲಿ ಎ.ಟಿ.ನಾಗರಾಜ್ ಅವರನ್ನು ಅಮಾನತ್ತು ಗೊಳಿಸಿ ಮೂಲಸ್ಥಾನವಾದ ಚನ್ನಗಿರಿ ತಾಲೂಕಿನ ಗ್ರಾಪಂವೋಂದಕ್ಕೆ ವರ್ಗಾವಣೆ ಮಾಡಲಾಗಿತ್ತು.
ಇದು ಕೊಲೆಯಾದ ರಾಮಕೃಷ್ಣನ ಪೋಷಕರನ್ನು ಕಣ್ಣೊರೆಸುವ ತಂತ್ರವೋ ಭ್ರಷ್ಟ ಪಿಡಿಓ ರಕ್ಷಣೆಯೋ ಎಂದು ಜಗಳೂರಿನ ನಾಗರೀಕರು ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಎ1 ಆರೋಪಿಯನ್ನು ಬಂಧಿಸಿ ಸೇವೆಯಿಂದಲೇ ವಜಾಗೊಳಿಸಬೇಕು ಎಂದು ನಾಯಕ ಸಮುದಾಯದ ಮುಖಂಡರಾದ ಸೂರಲಿಂಗಪ್ಪ, ವಕೀಲರಾದ ಓಬಳೇಶ್ ಸೇರಿದಂತೆ ಅನೇಕರು ಒತ್ತಾಯಿಸಿದ್ದಾರೆ.