ಸುದ್ದಿವಿಜಯ,ಜಗಳೂರು: ಸಾರ್ವತ್ರಿಕ ಚುನಾವಣೆಯ ಡೇಟ್ ಮೇ.10ಕ್ಕೆ ನಿಗದಿಯಾಗಿದೆ. ಕಾಂಗ್ರೆಸ್ನಿಂದ 166 ಕ್ಷೇತ್ರಗಳ ಪಟ್ಟಿಯನ್ನು ಹೈಕಮಾಂಡ್ ಬಿಡುಗಡೆಗೊಳಿಸಿದೆ. ಬಟ್ ಜಗಳೂರು ವಿಧಾನಸಭಾ ಕ್ಷೇತ್ರದ ಕೈಟಿಕೆಟ್ ಯಾರಿಗೆ ಎಂಬುದು ಇನ್ನೂ ಘೋಷಣೆಯಾಗಿಲ್ಲ. ಹೀಗಾಗಿ ಟಿಕೆಟ್ ಯಾರಿಗೆ ಸಿಗುತ್ತದೆ ಎನ್ನುವುದರ ಮೇಲೆ ಚುಣಾವಣೆ ಕಾವು ಏರಲಿದೆ.
ಕೈ ನಾಯಕರಿಂದ ಬಾರದ ಗ್ರೀನ್ ಸಿಗ್ನಲ್:
ಈಗಾಗಲೇ ಎರಡು ಪಟ್ಟಿ ರಿಲೀಸ್ ಮಾಡಿದ ಕೇಂದ್ರ ವರಿಷ್ಠರು ಜಗಳೂರು ಸೇರಿದಂತೆ 58 ಕ್ಷೇತ್ರಗಳ ಮೂರನೇ ಪಟ್ಟಿಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಬೇಗುದಿ, ಅಸಮಾಧಾನ ಗೊಂಡವರು, ಬಂಡಾಯಗಾರರನ್ನು ಶಮನಗೊಳಿಸಲು ಅಳೆದು ತೂಗಿ ಟಿಕೆಟ್ ಹಂಚಿಕೆ ಮಾಡುವ ಜಾಣತನದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನಲಾಗಿದೆ.
ಅಲ್ಲದೇ ಬಿಜೆಪಿ ಟಿಕೆಟ್ ವಂಚಿತರು ಕಾಂಗ್ರೆಸ್ ಕಡೆ ಬಂದರೆ ಅವರಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಳ್ಳುವ ತಂತ್ರವನ್ನು ಹೆಣೆದಿದ್ದಾರೆ ಎನ್ನಲಾಗಿದೆ.
ಹೀಗಾಗಿ ಜಗಳೂರು ಕ್ಷೇತ್ರದಲ್ಲಿ ಟಿಕೆಟ್ ಪ್ರಬಲ ಆಕಾಂಕ್ಷಿಗಳಾದ ಮಾಜಿ ಶಾಸಕ ಎಚ್.ಪಿ.ರಾಜೇಶ್, ಮುಖಂಡ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮತ್ತು ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಅವರು ಅಧಿಕೃತ ಅಭ್ಯರ್ಥಿ ಘೋಷಣೆಯಾಗದ ಕಾರಣ ಇನ್ನು ಚುನಾವಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿಲ್ಲ.
ಬಲ್ಲ ಮೂಲಗಳ ಪ್ರಕಾರ ಕೇಂದ್ರದ ವರಿಷ್ಠರಿಗೆ ರಾಜ್ಯದಿಂದ ಪಟ್ಟಿ ಹೋಗಿದ್ದು ಅದರಲ್ಲಿ ಇಬ್ಬರು ಟಿಕೆಟ್ ಆಕಾಂಕ್ಷಿಗಳ ಹೆಸರು ಹೋಗಿದೆ. ಅದರಲ್ಲಿ ವರಿಷ್ಠರು ಯಾರನ್ನು ಅಧಿಕೃತವಾಗಿ ಆಯ್ಕೆ ಮಾಡುತ್ತಾರೋ ಕಾದು ನೋಡಬೇಕಿದೆ.
ಬಿಜೆಪಿ ಟಿಕೆಟ್ ಎಸ್ವಿಆರ್ ಗೆ ಪಕ್ಕನಾ?
ಇತ್ತ ಬಿಜೆಪಿ ಪಕ್ಷದಿಂದ ಟಿಕೆಟ್ ಆಕಾಂಕ್ಷಿಗಳು ಇಲ್ಲ. ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಏಕೈಕ ಅಭ್ಯರ್ಥಿಯಾಗಿದ್ದಾರೆ. ಹಾಗಾಗಿ ಟಿಕೆಟ್ ಸಿಗೋದು ಪಕ್ಕ ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿಗಳ ಮೊದಲನೇ ಪಟ್ಟಿಯಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ. ಪಕ್ಷದಲ್ಲಿ ಅವರನ್ನು ಬಿಟ್ಟರೆ ಟಿಕೆಟ್ ನಿರೀಕ್ಷಿಸುವ ಅಥವಾ ಕೇಳುವ ಆಕಾಂಕ್ಷಿಗಳು ಇಲ್ಲವೇ ಇಲ್ಲ.
ಕಳೆದ ಎರಡು ತಿಂಗಳ ಹಿಂದೆ ನಿವೃತ್ತ ಪೊಲೀಸ್ ಅಥಿಕಾರಿ ಕಲ್ಲೇಶಪ್ಪ ಅವರು ಟಿಕೆಟ್ ಕೇಳಿದ್ದರು. ಅದಕ್ಕಾಗಿಯೇ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕ್ಷೇತ್ರದಲ್ಲಿ ಅಪರಿಚಿತರಾಗಿರುವ ಅವರಿಗೆ ಟಿಕೆಟ್ ಸಿಗಲ್ಲ ಎಂಬುದು ಖಾತ್ರಿಯಾಗಿದೆ. ಹಾಗಾಗಿ ಅವರು ಸದ್ಯದ ಸ್ಥಿತಿಯಲ್ಲಿ ಕಾದು ನೋಡುವ ತಂತ್ರದಲ್ಲಿದ್ದಾರೆ.
ಒಟ್ಟಾರೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಘೋಷಣೆಯಾಗದ ಹಿನ್ನೆಲೆ ಕ್ಷೇತ್ರದಲ್ಲಿ ಚುನಾವಣಾ ಕಾವು ಅಷ್ಟಾಗಿ ಕಾಣುತ್ತಿಲ್ಲ. ಟಿಕೆಟ್ ಘೋಷಣೆ ಆದ ಮರುದಿನವೇ ಪ್ರಚಾರದ ಅಬ್ಬರ ಜೋಗಾಗಲಿದೆ.