ಬೆಣ್ಣೆ ನಗರಿ ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಸಿಜೇರಿಯನ್, ಕಾರಣವೇನು ಗೊತ್ತಾ?

Suddivijaya
Suddivijaya August 26, 2023
Updated 2023/08/26 at 12:49 PM

ಸುದ್ದಿವಿಜಯ ವಿಶೇಷ,ದಾವಣಗೆರೆ: ಇಂದು ವೈದ್ಯಕೀಯ ಕ್ಷೇತ್ರ ನಿತ್ಯ ಹೊಸ ಪ್ರಯೋಗಗಳಿಗೆ ತನ್ನನ್ನು ತೆರೆದುಕೊಳ್ಳುತ್ತಿದೆ. ಆದರೆ ಸಹಜ ಹೆರಿಗೆ ವಿಚಾರದಲ್ಲಿ ಈ ಪ್ರಯೋಗ ಅದೇಕೊ ವಿಫಲವಾದಂತೆ ಕಾಣುತ್ತಿದೆ. ಇದು ವೈದ್ಯಕೀಯ ಮಾಫಿಯಾವೋ ಅಥವಾ ತಾಯಿ ಮತ್ತು ಮಗುವಿನ ಜೀವ ಉಳಿಸುವ ವೈದ್ಯರ ಅಂತಿಮ ಆಯ್ಕೆಯೋ ಎನ್ನುವ ಬಗ್ಗೆ ಸಾಕಷ್ಟು ಜಿಜ್ಞಾಸೆಗಳಿವೆ.

ಹೌದು. ಕಳೆದ 1 ವರ್ಷದಲ್ಲಿ ಜಿಲ್ಲೆಯಲ್ಲಿ ಆಗಿರುವ ಗರ್ಭಿಣಿಯರ ಹೆರಿಗೆಯ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಇಂಥಹದೊದು ಪ್ರಶ್ನೆ ಕಾಡದೇ ಇರದು. ಕಳೆದ 5 ವರ್ಷದ ಹಿಂದೆ ಸಿಜೇರಿಯನ್ ಪ್ರಮಾಣ ಶೇ.15 ರಿಂದ 20 ಇತ್ತು. ಆದರೆ 2022-23 ನೇ ಸಾಲಿನಲ್ಲಿ ಈ ಪ್ರಮಾಣ ಶೇ.35 ಕ್ಕೆ ಹೆಚ್ಚಳಗೊಂಡಿದೆ.

ಜಿಲ್ಲೆಯಲ್ಲಿ ಹೆರಿಗೆಗಾಗಿಯೇ ಚಿಗಟೇರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಕೆ.ಆರ್. ಮಾರ್ಕೆಟ್ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳು, ಹೊನ್ನಾಳಿ, ಚನ್ನಗಿರಿ, ಹರಿಹರ, ಜಗಳೂರು ತಾಲ್ಲೂಕು ಆಸ್ಪತ್ರೆಗಳು, 4 ಸಮುದಾಯ ಆಸ್ಪತ್ರೆಗಳು, 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿ ಸರ್ಕಾರಿ ವಲಯದ 35 ಆಸ್ಪತ್ರೆಗಳಲ್ಲಿ ಹೆರಿಗೆ ಸೌಲಭ್ಯಗಳಿವೆ.

15 ಖಾಸಗಿ ಹೆರಿಗೆ ಆಸ್ಪತ್ರೆಗಳಿವೆ. ಇಲ್ಲಿ ನಡೆಯುತ್ತಿರುವ ಹೆರಿಗೆಗಳಲ್ಲಿ ಶೇ.35ಕ್ಕೂ ಅಧಿಕ ಹೆರಿಗೆಗಳು ಸಿಜೇರಿಯನ್ ಆಗಿವೆ ಎನ್ನುತ್ತಾರೆ ಆರ್‍ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ.


ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ ಒಟ್ಟು ಹೆರಿಗೆಗಳ ಸಂಖ್ಯೆ 25,707. ಇದರಲ್ಲಿ 9011 ಸಿಜೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಕಳೆದ 5 ವರ್ಷದ ಅಂಕಿ ಸಂಖ್ಯೆ ಗಮನಿಸಿದರೆ ಶೇ 15 ರಿಂದ 20 ಇದ್ದ ಈ ಪ್ರಮಾಣ ಈ ವರ್ಷ 35 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸಿಜೇರಿಯನ್ ಹೆರಿಗೆ ಪ್ರಮಾಣ ಶೇ.10 ರಿಂದ 15 ಕ್ಕೆ ಏರಿದೆ. ಇದು ಸಹಜವಾಗಿಯೇ ಯೋಚನೆ ಮಾಡಬೇಕಾದ ಸಂಗತಿ ಎನ್ನುತ್ತಾರೆ ಡಾ.ಮೀನಾಕ್ಷಿ.

ಕಳೆದ ವರ್ಷ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ 7 ಸಾವಿರ ಹೆರಿಗೆ ಆಗಿದ್ದರೆ. ಇದರಲ್ಲಿ 2 ಸಾವಿರಕ್ಕೂ ಅಧಿಕ ಸಿಜೇರಿಯನ್ ಹೆರಿಗೆ ಇವೆ. ಇದಕ್ಕೆ ಹಲವು ಕಾರಣಗಳಿವೆ. `ಗರ್ಭಿಣಿಯರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಹಿತ ವಿವಿಧ ಕಾಯಿಲೆಗಳಿದ್ದರೆ, ಗರ್ಭದಲ್ಲಿ ಅವಳಿ ಶಿಶುಗಳಿದ್ದರೆ ಹೆಚ್ಚು ಅಪಾಯವನ್ನು ಆಹ್ವಾನಿಸುವುದು ಸರಿಯಲ್ಲ ಎಂಬ ಕಾರಣಕ್ಕೆ ವೈದ್ಯರು ಸಿಜೇರಿಯನ್‍ಗೆ ಶಿಫಾರಸು ಮಾಡುತ್ತಾರೆ. ಆದರೆ, ಸಾಮಾನ್ಯವಾಗಿ ಈ ಪ್ರಮಾಣ ಶೇ 10ರಿಂದ ಶೇ 12 ರಷ್ಟೇ ಇರುತ್ತಿತ್ತು.

ನಿಗದಿತ ಸಮಯಕ್ಕೆ ಹೆರಿಗೆ ಆಗದಿದ್ದರೆ, ಆಸ್ಪತ್ರೆಗೆ ಬರುವುದು ತಡವಾಗಿದ್ದರೆ ಸಿಜೇರಿಯನ್ ಮೊರೆ ಹೋಗಬೇಕಾಗುತ್ತದೆ. ಇವುಗಳ ಪ್ರಮಾಣವೂ ಶೇ 3ರಿಂದ 5 ದಾಟುತ್ತಿರಲಿಲ್ಲ. ಇಂಥವುಗಳನ್ನು ಹೊರತುಪಡಿಸಿ ಮಿಕ್ಕ ಸಂದರ್ಭದಲ್ಲಿ ಸಹಜ ಹೆರಿಗೆಯಾಗಬೇಕು. ಆದರೆ ಸಹಜ ಹೆರಿಗೆಗಳ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ’ ಎಂದು ಡಾ.ಕೆ.ಎಸ್. ಮೀನಾಕ್ಷಿ ಹೇಳುತ್ತಾರೆ.

ಗರ್ಭಿಣಿಯರು ಪೌಷ್ಟಿಕ ಆಹಾರ ಸೇವಿಸುವುದು ಅಗತ್ಯ. ಒಂದೆರಡು ಗಂಟೆ ಅಧಿಕ ವಿಶ್ರಾಂತಿಯೂ ಬೇಕು. ಜತೆಗೆ ದೈಹಿಕ ಚಟುವಟಿಕೆ ಇರಲೇಬೇಕು. ಗರ್ಭ ಧರಿಸಿದ ಕೂಡಲೇ ದೈಹಿಕ ಚಟುವಟಿಕೆ ನಿಲ್ಲಿಸಿ, ಹೆಚ್ಚು ಆಹಾರ ಸೇವಿಸುವುದು ಮತ್ತು ಅಧಿಕ ವಿಶ್ರಾಂತಿಗೆ ಒತ್ತು ನೀಡುವುದೂ ಸಿಜೇರಿಯನ್ ಪ್ರಮಾಣ ಹೆಚ್ಚಲು ಕಾರಣ ಎಂದು ಅವರು ವಿವರಿಸುತ್ತಾರೆ.

`ಒಂದನೇ ಮಗು ಸಿಜೇರಿಯನ್ ಆಗಿದ್ದರೆ ಎರಡನೇ ಮಗುವೂ ಸಿಜೇರಿಯನ್ ಮಾಡಲೇಬೇಕಾಗುತ್ತದೆ ಎಂಬ ಕಲ್ಪನೆ ಜನರಲ್ಲಿದೆ. ಹಾಗೇನೂ ಇಲ್ಲ. ಎರಡನೇ ಹೆರಿಗೆ ಸಹಜವಾಗಿ ಆಗಬಹುದು ಎಂಬ ಅರಿವು ಮೂಡಿಸುತ್ತಿದ್ದೇವೆ.

ಆದರೆ ಜನ ಅದನ್ನು ಕೇಳಲು ತಯಾರಿಲ್ಲ’ ಸಹಜ ಹೆರಿಗೆಗೆ ಗರ್ಭಿಣಿ ಮಹಿಳೆ ಮಾನಸಿಕವಾಗಿ ಸಿದ್ಧವಾಗಿರಬೇಕು. ಆದರೆ ನೋವು ಸಹಿಸಲು ಆಗುವುದೇ ಇಲ್ಲ ಎಂದು ಮಾನಸಿಕವಾಗಿ ಕುಗ್ಗಿದರೆ ವೈದ್ಯರ ಮುಂದಿರುವ ಅಂತಿಮ ಆಯ್ಕೆ ಸಿಜೇರಿಯನ್ ಮಾತ್ರ ಎನ್ನುತ್ತಾರೆ ಅವರು.

ಆದರೆ ಜನಮಾನಸದಲ್ಲಿ ಸಿಜೇರಿಯನ್ ಹೆರಿಗೆಗಳ ಬಗ್ಗೆ ಬೇರೆಯದೇ ಅನಿಸಿಕೆಗಳಿವೆ. “ಅಯ್ಯೋ ನಮ್ಮ ಮಗಳು, ಸೊಸೆ, ನಾರ್ಮಲ್ ಹೆರಿಗೆಗೆ ರೆಡಿ ಇದ್ದಳು. ಡಾಕ್ಟರ್ ರಿಕ್ಸ್ ಇದೆ ಎಂದು ಸಿಜೇರಿಯನ್ ಮಾಡಿದರು” ಎಂಬ ಮಾತುಗಳು ಸಾಕಷ್ಟು ಕೇಳಿ ಬರುತ್ತಿವೆ.

ಒಂದು ಕಾಲದಲ್ಲಿ ಎಂಟತ್ತು ಮಕ್ಕಳನ್ನು ಸಹಜವಾಗಿಯೇ ಮಹಿಳೆಯರು ಹೆರುತ್ತಿದ್ದರು. ಇಂದು ಒಂದೇ ಮಗುವನ್ನು ತಾಯಿಯ ಗರ್ಭವನ್ನೇ ಸೀಳಿ ಹೊರತರುವ ಸ್ಥಿತಿ ಇದೆ. ವೈದ್ಯಕೀಯ ಸಾಕಷ್ಟು ಕ್ಷೇತ್ರ ಮುಂದುವರಿದಿದೆ. ಆದರೆ ನೋವು ಸಹಿಸಿಕೊಳ್ಳುವ ಮಾನಸಿಕತೆ ಇಂದಿನ ತಾಯಂದಿರಿಗಿಲ್ಲ ಎನ್ನುವಂತಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!