ಸುದ್ದಿವಿಜಯ, ಚನ್ನಗಿರಿ : ರೈತರು ಹೆಚ್ಚೆಚ್ಚು ಹಾಲು ಉತ್ಪಾದಿಸಿ ತಮ್ಮ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಶಿಮುಲ್ ಉಪಾಧ್ಯಕ್ಷ ಎಚ್.ಕೆ. ಬಸಪ್ಪ ಹೇಳಿದರು.
ತಾಲೂಕಿನ ಕಂಚುಗಾರನಹಳ್ಳಿಯಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆಯು ಪ್ರತಿಯೊಬ್ಬರ ರೈತನ ಅವಿಭಾಜ್ಯ ಅಂಗವಾಗಿದ್ದು, ಹೆಚ್ಚು ಜಾನುವಾರುಗಳನ್ನು ಸಾಕುವ ಮೂಲಕ ಹಾಲನ್ನು ಹೆಚ್ಚು ಉತ್ಪಾದಿಸಿ ಆರ್ಥಿಕತೆ ಹೆಚ್ಚಿಸಿಕೊಳ್ಳಬೇಕೆಂದು ಹೇಳಿದರು.
ಹಾಲು ಉತ್ಪಾದಕರ ಸಂಘದಲ್ಲಿ ಒಟ್ಟು 120 ಜನರು ಸದಸ್ಯತ್ವ ಹೊಂದಿದ್ದು, 75 ಜನರು ಹಾಜರಾಗಿದ್ದಾರೆ. ಈ ಬಾರಿ ಸಂಘಕ್ಕೆ 1 ಲಕ್ಷ ನಿವ್ವಳ ಲಾಭ ಬಂದಿದೆ. ಹನಿ-ಹನಿ ಸೇರಿದರೆ ಹಳ್ಳ ಎಂಬ ಗಾದೆ ಮಾತಿನಂತೆ ಪ್ರತಿಯೊಬ್ಬರು ಕೈ ಜೋಡಿಸಿದರೆ ಸಹಕಾರ ಕ್ಷೇತ್ರ ಮುಂದುವರಿಯಲಿದೆ.
ಆದ್ದರಿಂದ ರೈತರು ಹೆಚ್ಚು ಜಾನುವಾರುಗಳನ್ನು ಸಾಕಿ ಮುಂದಿನ ದಿನಗಳಲ್ಲಿ ಹೆಚ್ಚು ಹಾಲು ಉತ್ಪಾದಿಸಿ ದಾವಣಗರೆಯಲ್ಲಿಯೇ ಮಾದರಿ ಸಂಘ ಮಾಡಬೇಕೆನ್ನುವ ಛಲ ಇದೆ. ಇದಕ್ಕಾಗಿ ನಿಮ್ಮ ಸಹಕಾರ ಅಗತ್ಯವಿದ್ದು, ಹಾಲು ಉತ್ಪಾದಕರ ಸಂಘದ ಕೈ ಬಲಪಡಿಸಿ ಎಂದರು.ಹಾಲಿನ ಸೊಸೈಟಿಯಲ್ಲಿ ಸದಸ್ಯತ್ವ ಹೊಂದಿದರೆ ಸರಕಾರದಿಂದ ವಿಮೆ ನೀಡಲಾಗುವುದು. ಶಿಮುಲ್ನಿಂದ ಹಸುಗಳಿಗೂ ವಿಮೆ ಸಿಗಲಿದೆ, ಹಸುಗಳ ಲಾಲನೆ ಪಾಲನೆ ಮಾಡಲು ವೈದ್ಯರನ್ನು ನೇಮಿಸಲಾಗುವುದು. ಹಸುಗಳಿಗೆ ಬೇಕಾಗಿರುವ ಪುಡ್ನ್ನು ಸಬ್ಸಿಡಿ ದರದಲ್ಲಿ ನೀಡಲಾಗುವುದು. ಆದ್ದರಿಂದ ಸಂಘದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಪಂಚದಲ್ಲೇ ಹಾಲು ಉದ್ದಿಮೆ ಪ್ರಸಿದ್ಧಿಯಾಗಿದೆ. ಪರಿಣಾಮ ಹೈನುಗಾರಿಕೆಯು ಜನರ ಪ್ರಮುಖ ಕಸುಬಾಗಿ ಸ್ಥಾನ ಪಡೆದಿದೆ. ಗುಣಮಟ್ಟದ ಹಾಲನ್ನು ರೈತರು ಸರಬರಾಜು ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. ಇದರಿಂದ ರೈತರಿಗೂ ಹೆಚ್ಚಿನ ಅನುಕೂಲವಾಗಲಿದೆ. ಕೃಷಿಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ, ಕೋಳಿ/ಕುರಿ ಸಾಕಣೆಯಂತಹ ಉಪ ಕಸುಬುಗಳನ್ನು ರೂಢಿಸಿಕೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ಆರ್.ಮಂಜಪ್ಪ, ನಿರ್ದೇಶಕರಾದ ರುದ್ರೇಗೌಡ, ಫಿರೋಜಿರಾವ್, ತಿಪ್ಪೇಶಪ್ಪ, ಕೆ.ಎಂ.ಸಿದ್ದಯ್ಯ, ಹಾಲೇಶಪ್ಪ ಸೇರಿದಂತೆ ಇತರರು ಇದ್ದರು.