ಸಪ್ತಪದಿ ತುಳಿದ ದಂಪತಿಗೆ ಒಂದೇ ಸಮಯದಲ್ಲಿ ಹೃದಯಾಘಾತ!

Suddivijaya
Suddivijaya December 25, 2022
Updated 2022/12/25 at 2:10 PM

ಸುದ್ದಿವಿಜಯ,ದಾವಣಗೆರೆ :  ಗಂಡ-ಹೆಂಡತಿ ಸಂಬಂಧ ಸ್ಬರ್ಗದಲ್ಲೇ ನಿಶ್ಚಿತವಾಗಿರುತ್ತದೆ ಎಂದು ಮದುವೆಗೆ ಮುಂಚೆ ಅನೇಕರು ಮಾತನಾಡುತ್ತಾರೆ. ಆದರೆ ಮದುವೆಯಾದ ಮೇಲೆ ಯಾರು, ಯಾವಾಗ ಮೃತಪಡುತ್ತಾರೆ ಎಂದು ಗೊತ್ತಿಲ್ಲ. ಆದರೆ ಇಲ್ಲೊಂದು ಪ್ರಕರಣದಲ್ಲಿ ಗಂಡ-ಹೆಂಡತಿ ಇಬ್ಬರು ಒಂದೇ ಸಮಯದಲ್ಲಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿರುವುದು ಆಶ್ಚರ್ಯ ಉಂಟು ಮಾಡಿದೆ.

ದಾವಣಗೆರೆ ನಗರದ ಎಸ್‍ಓಜಿ ಕಾಲೋನಿ ನಿವಾಸಿ ಫಕೀರಪ್ಪ ಗೋಖಾವಿ (87), ಚಂದ್ರಮ್ಮ ಫಕೀರಪ್ಪ ಗೋಖಾವಿ (70) ಮೃತಪಟ್ಟ ದುರ್ದೈವಿಗಳು. ಫಕೀರಪ್ಪರವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಶುಕ್ರವಾರ ಸಂಜೆ ಹೃದಯಘಾತವಾಗಿ ಕುಸಿದು ಬಿದ್ದಿದ್ದಾರೆ.

ಇದನ್ನು ನೋಡಿದ ಪತ್ನಿ ಚಂದ್ರಮ್ಮ ಕೇವಲ ಹತ್ತು ನಿಮಿಷದಲ್ಲಿ ಮೃತಪಟ್ಟಿದ್ದಾರೆ. ಇವರ ಸೊಸೆ ಪುಷ್ಪ ಹೊಳೆಹೊನ್ನೂರಿಗೆ ಹೋದಾಗ ಘಟನೆ ನಡೆದಿದೆ.

ಪತಿ ಫಕೀರಪ್ಪ ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದರೆ, ಪತ್ನಿ ಸ್ವಾತಂತ್ರ್ಯ ಸಿಗುವ ವೇಳೆ ಹುಟ್ಟಿದ್ದರು. ಇವರಿಬ್ಬರ ಜೀವನ ಅನ್ಯೋನ್ಯವಾಗಿತ್ತು. ಮದುವೆಯಾಗಿ ಒಂದೇ ದಿನದಲ್ಲಿ ಡಿವೈರ್ಸ್ ಕೊಡುವ ಈ ಕಾಲದಲ್ಲಿ ಅನೇಕ ವರ್ಷಗಳ ಕಾಲ ತಾನು ಕಟ್ಟಿಕೊಂಡ ಪತಿಯೇ ಜೀವಾಳ ಎಂದು ಸುಮಾರು 55 ವರ್ಷಗಳ ಕಾಲ ಜತೆ ಹೆಜ್ಜೆಗೆ ಹೆಜ್ಜೆ ಹಾಕಿ ಜೀವನ ಮಾಡುತ್ತಿದ್ದ ದಂಪತಿ ಈಗ ಇಲ್ಲವಾಗಿದ್ದಾರೆ.

ಈರುಳ್ಳಿ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಫಕೀರಪ್ಪ ಮಕ್ಕಳು ದೊಡ್ಡವರಾದ ಬಳಿಕ ಕೆಲಸ ಬಿಟ್ಟಿದ್ದರು. ಸಮೀಪದ ಅಂಗಡಿಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಾ. ಜೀವನ ಸಾಗಿಸುತ್ತಿದ್ದರು. ಪತ್ನಿ ಪತಿ ಫಕೀರಪ್ಪರ ದಿನಚರಿಯನ್ನು ನೋಡಿಕೊಳ್ಳುತ್ತಿದ್ದರು. ಅಲ್ಲದೇ ಅವರ ಲಾಲನೆ ಪಾಲನೆ ಮಾಡುತ್ತಿದ್ದರು. ಜನರ ಜತೆ ಯಾವಾಗಲೂ ಫಕೀರಪ್ಪ ಬೆರೆಯುತ್ತಿದ್ದು, ನಗುನಗುತ್ತಾ ಜೀವನ ಸಾಗಿಸುತ್ತಿದ್ದರು.

ಶಾಮನೂರು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಭಾನುವಾರ ನಡೆಯಿತು. ಮೃತರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ . ಒಟ್ಟಿನಲ್ಲಿ ಸಪ್ತಪದಿ ತುಳಿದ ದಂಪತಿ ಒಟ್ಟಿಗೆ ಇಹ ಲೋಕಕ್ಕೆ ತೆರಳಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!