ಪ್ರಣೀತಿ ಶಿಂಧೆ ಆಗಮನ ಜಗಳೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಹೆಚ್ಚಿದ ಉತ್ಸಾಹ!

Suddivijaya
Suddivijaya February 7, 2023
Updated 2023/02/07 at 12:34 PM

ಸುದ್ದಿವಿಜಯ, ಜಗಳೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ ಎಂದು ಎಐಸಿಸಿ ವೀಕ್ಷಕರಾಗಿ ಆಮಿಸಿದ್ದ ಮಹಾರಾಷ್ಟ್ರ ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಧ್ಯಕ್ಷರೂ ಹಾಗೂ ಮಾಜಿ ಸಿಎಂ ಸುಶೀಲ್ ಕುಮಾರ್ ಸಿಂಧೆ ಪುತ್ರಿ ಶಾಸಕಿ ಪ್ರಣೀತಿ ಶಿಂಧೆ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಅಭ್ಯರ್ಥಿಗಳ ಆಯ್ಕೆ ಸಂಬಂಧ ಕರೆದಿದ್ದ ಒನ್ ಟು ಒನ್ ಚರ್ಚೆಗೂ ಮುನ್ನ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಜಗಳೂರು ಕ್ಷೇತ್ರದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಜನರನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕರು ಹಿಂದುಳಿದ ಜಾತಿ ಜನರನ್ನು ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಅದರಲ್ಲಿ ನಾನು ಭಾಗವಿಸಿದ್ದೆ ಎಂದರು.

ಅಭ್ಯರ್ಥಿ ಯಾರೇ ಆದರೂ ಸಹ ಒಮ್ಮತದಿಂದ ಪಕ್ಷದ ಅಭ್ಯರ್ಥಿಗೆ ಮತ ಹಾಕುಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಒಳ್ಳೆಯ ವಾತಾವರಣ ಇದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಕಿಸಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಪ್ರಣೀತಿ ಶಿಂಧೆ ಉದ್ಘಾಟಸಿದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಪ್ರಣೀತಿ ಶಿಂಧೆ ಉದ್ಘಾಟಸಿದರು.

ಬಿಜೆಪಿ ಅಂಬಾನಿ ಅಧಾನಿ ಪಾರ್ಟಿ. ಕೇವಲ ಉದ್ಯಮಿಗಳಿಗೆ ಮಣೆಹಾಕಿದೆ. ಗ್ರಾಮೀಣ ಭಾಗದ ಜನರ ಸ್ಥಿತಿಗತಿಗಳಿಗೆ ಅವರು ಮಣೆ ಹಾಕಿಲ್ಲ. ಉಳ್ಳವರಷ್ಟೇ ಅವರ ಕಣ್ಣಿಗೆ ಕಾಣುತ್ತಾರೆ. ಈಗಲೂ ಸಹ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ ಕಾರ್ಯಕರ್ತರು ಬಲಿಷ್ಠವಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ಪಕ್ಷ ದೇಶವನ್ನು ಕಟ್ಟಿದೆ.

ಈಗ ಕಾಂಗ್ರೆಸ್ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಲ ಬಂದಿದೆ. ಜೊತೆಗೆ ಮಾಜಿ ಸಿಎಂ ಸಿದ್ಧರಾಮಯ್ಯ, .ಕೆ.ಶಿವಕುಮಾರ್ ಅವರ ಬಲದಿಂದ ಅಧಿಕಾರಕ್ಕೆ ಬರುವುದು ನಿಶ್ಚಿತ. ಅತಿಯಾದ ಆತ್ಮವಿಶ್ವಾಸ ಹೊಂದದೇ ತಳಮಟ್ಟದಿಂದ ಪಕ್ಷವನ್ನು ಬಲಪಡಿಸಿ ಎಂದು ಕರೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜಪ್ಪ, ದಾವಣಗೆರೆ ಕ್ಷೇತ್ರದಲ್ಲಿ ಹೊನ್ನಾಲಿ, ಚನ್ನಗಿರಿ, ಹರಿಹರ ಸೇರಿ ಎಲ್ಲಾ ಕ್ಷೇತ್ರಗಳ ಸ್ಥಿತಿಗತಿ ಅಧ್ಯಯನಕ್ಕೆ ಪ್ರಣೀತಿ ಶಿಂಧೆ ಅವರನ್ನು ಎಐಸಿಸಿ ಇಂದ ವೀಕ್ಷಕರನ್ನಾಗಿ ನೇಮಕ ಮಾಡಿದ್ದಾರೆ. ಸಂಘನೆಯ ಮಾಹಿತಿ ಕಲೆಹಾಕಲು ಅವರು ಬಂದಿದ್ದಾರೆ. ಪ್ರತಿ ಕ್ಷೇತ್ರದ ಸ್ಥಿತಿ ಗತಿ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಿದ್ದಾರೆ ಎಂದರು.

ಮಾಜಿ ಶಾಸಕ ಎಚ್.ಪಿ ರಾಜೇಶ್ ಮಾತನಾಡಿ, ಈ ದೇಶಕ್ಕೆ ಕಾಂಗ್ರೆಸ್ ಕೊಟ್ಟ ಕೊಡುಗೆ ಯಾರು ಮರೆಯುವಂತಿಲ್ಲ. ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಸಾಮಾಜಿಕ ನ್ಯಾಯದ ತಳಹದಿಯಲ್ಲೇ ಪಕ್ಷ ಮತ್ತು ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದರು.

ಯಾತ್ರೆಯಲ್ಲಿ ಭಾಗಿ ಪಟೇಲ್‍ಗೆ ಸನ್ಮಾನ:
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಸುದೀರ್ಘ ನಾಲ್ಕೂವರೆ ತಿಂಗಳು 4200 ಕಿ.ಮೀ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಜಗಳೂರು ಕ್ಷೇತ್ರದ ಉಸ್ತುವಾರಿ ಹಾಗೂ ದಾವಣಗೆರೆಯಿಂದ ಏಕೈಕ ಮುಖಂಡರಾಗಿ ಭಾಗವಹಿಸಿದ್ದ ಕಲ್ಲೇಶ್ ರಾಜ್ ಪಾಟೀಲ್ ಅವರನ್ನು ಕಾರ್ಯಕರ್ತರು ಅಭಿಮಾನಿಗಳು ಸನ್ಮಾನಿಸಿದರು.

ಒನ್ ಟು ಒನ್ ಚರ್ಚೆಯಲ್ಲಿ ಆಕಾಂಕ್ಷಿಗಳೇ ಗೈರು?
ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಕೆ.ಪಿ.ಪಾಲಯ್ಯ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಬಸವಾಪುರ ರವಿಚಂದ್ರ, ಎಂ.ಹನುಮಂತಪ್ಪ ಹಾಗೂ ಪುಷ್ಮಾ ಲಕ್ಷ್ಮಣಸ್ವಾಮಿ ಇವರಲ್ಲಿ ಟಿಕೆಟ್ ಪ್ರಬಲ ಆಕಾಂಕ್ಷಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಹಾಗೂ ಪುಷ್ಪಾಲಕ್ಷ್ಮಣಸ್ವಾಮಿ ಅವರು ಗೈರು ಹಾಜರಿಯಾಗಿದ್ದು ಎದ್ದು ಕಾಣುತ್ತಿತ್ತು.

ಸಿಂಧೆ ಕೊಠಡಿಯೊಂದರಲ್ಲಿ ಗುಪ್ತವಾಗಿ ಒನ್ ಟು ಒನ್ ಚೆರ್ಚೆ ನಡೆಸಿದರು. ಪ್ರಬಲ ಆಕಾಂಕ್ಷಿ ಚಿಕ್ಕಮ್ಮನಹಟ್ಟಿ ದೇವೇಂದ್ರ ಗೈರು ಹಾಜರಿಯಿಂದ ಕಾರ್ಯಕರ್ತರು ಗುಸು ಗುಸು ಚರ್ಚೆ ನಡೆಸಿದ್ದು ಕಂಡು ಬಂತು. ಅಭಿಪ್ರಾಯ ಸಂಗ್ರಹಣೆ ವೇಳೆ ಮಾಜಿ ಶಾಸಕ ಎಚ್.ಪಿ ರಾಜೇಶ್ ಅವರಿಗೆ ಟಿಕೆಟ್ ಕೊಡಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ಈ ವೇಳೆ ಬ್ಲಾಕ್ ಅಧ್ಯಕ್ಷ ಷಂಷೀರ್ ಅಹ್ಮದ್, ಮಂಜುನಾಥ್, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಗೌಡ, ಸುರೇಶ್ ಗೌಡ, ಮಾಜಿ ಜಿಪಂ ಅಧ್ಯಕ್ಷೆ ನಾಗರತ್ನಮ್ಮ, ಮಾಜಿ ಜಿಪಂ ಸದಸ್ಯ ರಾಮರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೆಂಚಮ್ಮ, ಪಪಂ ಸದಸ್ಯ ರವಿಕುಮಾರ್, ಮಹಮದ್ ಖಾಸೀಂ ಶಕೀಲ್ ಅಹ್ಮದ್, ರವಿಚಂದ್ರ, ಉಮಾಪತಿ, ಶಂಭುಲಿಂಗಪ್ಪ, ಸಿ.ತಿಪ್ಪೇಸ್ವಾಮಿ, ಚಟ್ನಳ್ಳಿ ರಾಜಣ್ಣ ಸೇರಿದಂತೆ ಅನೇಕರು ಇದ್ದರು.

 

Share this Article
Leave a comment

Leave a Reply

Your email address will not be published. Required fields are marked *

error: Content is protected !!