ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಮೂರು ಕೋವಿಡ್-19 ಸಕ್ರಿಯ ಪ್ರಕರಣಗಳು ಕಂಡು ಬಂದಿವೆ ಎಂದು ಪಟ್ಟಣದ ಸರಕಾರಿ ಆಸ್ಪತ್ರೆ ಮುಖ್ಯ ಆರೋಗ್ಯಾಧಿಕಾರಿ ಡಾ.ಬಿ.ವಿ.ನಿರಜ್ ಸೋಮವಾರ ಮಾಹಿತಿ ನೀಡಿದ್ದಾರೆ
ತೀವ್ರ ಜ್ವರ, ಕೆಮ್ಮು, ನೆಗಡಿ ಎಂದು ಬಂದವರಿಗೆ ರ್ಯಾಪಿಡ್ ಪರೀಕ್ಷೆ ಮಾಡಿಸಿದಾಗ ಮೂವರಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಸಾರ್ವಜನಿಕರು ಎಚ್ಚರವಾಗಿರಬೇಕು ಎಂದು ಮಾಹಿತಿ ನೀಡಿದ್ದಾರೆ.
ಎಚ್3-ಎನ್2 ಸಿಂಟಮ್ಸ್ ಕಾಣಿಸಿಕೊಂಡಿದ್ದು, ಜನರು ಭಯ ಭೀತರಾಗುವ ಅಗತ್ಯವಿಲ್ಲ. ಆ ಲಕ್ಷಣವಿರುವ ವ್ಯಕ್ತಿಗಳನ್ನು ಹೋಂ ಐಸೋಲೇಷನ್ನಲ್ಲಿರಲು ಸೂಚಿಸಿ ಅಗತ್ಯ ಔಷಧ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮೂರು ಪ್ರಕರಣಗಳು ಪತ್ತೆಯಾಗಿರುವ ವಸತಿ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಬೇಕು. ಕುಟುಂಬ ಸದಸ್ಯರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದೇವೆ. ತಾಲೂಕು ವೈದ್ಯಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ರವಾನೆಯಾಗಿದೆ. ಸಂಬಂಧಪಟ್ಟ ಪಿಎಚ್ಸಿ ಸೆಂಟರ್ಗಳಿಗೆ ಮಾಹಿತಿ ರವಾನೆಯಾಗಿದೆ ಎಂದರು.
ಹೊಸ ಸಂವತ್ಸರಕ್ಕೆ ಖರೀದಿ ಜೋರು: ಇತ್ತ ಕೋವಿಡ್ ಸೋಂಕು ಎಚ್ಚಾಗುತ್ತಿದ್ದರೂ ಜನರು ಪಟ್ಟಣದ ಮುಖ್ಯರಸ್ತೆ, ನೆಹರೂ ರಸ್ತೆ, ಹೊಸಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣಗಳಲ್ಲಿ ಹೊಸ ಸಂವತ್ಸರ ಚಂದ್ರಮಾನ ಯುಗಾದಿ ಹಬ್ಬಕ್ಕೆ ಬೇಕಾಗುವ ಅಗತ್ಯ ವಸ್ತುಗಳ ಖರೀದಿಯಲ್ಲಿ ಗುಂಪು ಗುಂಪಾಗಿ ನಿಂತು ಖರೀದಿದಿಸುವ ದೃಶ್ಯ ಕಂಡು ಬಂತು.
![ಜಗಳೂರು ಪಟ್ಟಣದಲ್ಲಿ ಹಬ್ಬಕ್ಕೆ ವಸ್ತುಗಳನ್ನು ಖರೀಸಿಯಲ್ಲಿ ತೊಡಗಿರುವ ಜನರು.](http://suddivijaya.com/wp-content/uploads/2023/03/ugadi-karidi.jpg)
ಬೆಲೆಗಳ ಹೆಚ್ಚಳ: ಬಾಳೆ ಹಣ್ಣು ಕೆಜಿಗೆ 100 ರೂ, ಸೇಬು ಕೆಜಿಗೆ 200, ಹೂವಿನ ಹಾರ 100 ರೂ, ಬಿಡಿ ಹೂಗಳಾದ ಸೇವತಿ, ಕನಕಾಂಬರ, ಮಲ್ಲಿಗೆ ಹೂವುಗಳ ಬೆಲೆ ಗಗನಕ್ಕೇರಿವೆ. ಜೊತೆಗೆ ತರಕಾರಿಗಳಲ್ಲಿ ಈರುಳ್ಳಿ, ಟೊಮೆಟೊ ಹೊರತುಪಡಿಸಿ ಕ್ಯಾರೇಟ್, ಬೀನ್ಸ್, ಸೊಪ್ಪು, ನಿಂಬೆಹಣ್ಣು, ಬೆಳ್ಳುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಲೆಗಳು ಕೆಜಿ 60 ರಿಂದ 80 ರೂಗೆ ಏರಿಕೆ ಕಂಡು ಬಂದವು.