ಸುದ್ದಿವಿಜಯ, ಜಗಳೂರು: ತಾಲೂಕಿನ ಸಿದ್ದಯ್ಯನಕೋಟೆ, ಬಸವನಕೋಟೆ ಮತ್ತು ಜಾಡನಕಟ್ಟೆ ಗ್ರಾಮಗಳಿಗೆ ಸೇರಿದ ಜಮೀನನ್ನು ಹರಪನಹಳ್ಳಿ ತಾಲೂಕಿನ ಕೆಲವರು ಒಳಮಾರ್ಗದ ಮೂಲಕ ಸಕ್ರಮ ಮಾಡಿಸಿಕೊಂಡು ಉಳಿಮೆ ಮಾಡುತ್ತಿದ್ದಾರೆ. ಜಮೀನು ವಶಪಡಿಸಿ ಜಾನುವಾರು ಮೇವಿಗೆ ಮುಕ್ತವಾಗಿಸಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ಸದಸ್ಯರು ಗುರುವಾರ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ವೆ ನಂ 273 ರ 85 ಎಕರೆ ಜಮೀನು ಹುಲ್ಲುಬನ್ನಿ ಖರಾಬು ಆಗಿದ್ದು, ಕೆಲವು ಜನರು ಈ ಜಮೀನನ್ನು ಈಗಾಗಲೇ ಅಕ್ರಮವಾಗಿ ಸಾಗುವಳಿ ಮಾಡುತ್ತಿದ್ದಾರೆ. ರೈತರ ಜಾನುವಾರುಗಳನ್ನು ಮೇಯಿಸಲು ಈ ಎರಡು ಗ್ರಾಮಗಳಲ್ಲಿ ಗೋಮಾಳ ಇಲ್ಲದಂತಾಗಿದೆ. ಈ ಹಿಂದೆ 2018-19 ಹಾಗೂ 2020-21ರಲ್ಲಿ ಗರಪನಹಳ್ಳಿಗೆ ಸೇರಿದ ಕೆಲವು ರೈತರುಗಳಿಗೆ ಈ ಹಿಂದಿನ ತಹಶೀಲ್ದಾರ್ ಸಾಗುವಳಿ ಚೀಟಿ ಕೊಟ್ಟು ಸಕ್ರಮ ಪಹಣಿಯನ್ನು ಮಾಡಿಕೊಟ್ಟಿದ್ದಾರೆ.
![22ಜೆಎಲ್ಆರ್ಚಿತ್ರ1ಎ: ಜಗಳೂರು ತಹಶೀಲ್ದಾರ್ ಕಚೇರಿಗೆ ರೈತ ಮುಖಂಡರು ತೆರಳಿ ಅಕ್ರಮ ಜಮೀನು ಗೋಮಾಳಕ್ಕೆ ಬಿಡಿಸುವಂತೆ ಮನವಿಸಲ್ಲಿಸಿದರು.](http://suddivijaya.com/wp-content/uploads/2022/12/PROTEST2.jpg)
ಹೀಗಾಗಿ ಅವುಗಳ ಪಹಣಿ ಮತ್ತು ಸಾಗುವಳಿ ರದ್ದುಪಡಿಸಿ ಹುಲ್ಲಬನ್ನಿ ಖರಾಬು ಜಮೀನನ್ನು ಈ ಎರಡು ಗ್ರಾಮಗಳ ಗೋಮಾಳಕ್ಕಾಗಿ ಬಿಡಿಸಿಕೊಡಬೇಕು ಎಂದು ತಹಶೀಲ್ದಾರ್ ಗ್ರೇಡ್-2 ಮಂಜಾನಂದ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷರಾದ ಪಿ.ಗಂಗಾಧರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ, ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್, ರಾಜನಹಟ್ಟಿ ರಾಜು, ತಾಲೂಕು ಗೌರವಾಧ್ಯಕ್ಷ ವೀರೇಶ್ ಚಿಕ್ಕಬನ್ನಿಹಟ್ಟಿ, ಸಹದೇವರೆಡ್ಡಿ, ಎಂ.ಶರಣಪ್ಪ, ಯರಲಕಟ್ಟೆ ಕೆಂಚಪ್ಪ, ಪ್ರಹ್ಲಾದಪ್ಪ, ಎ.ಡಿ.ಬಸವರಾಜಪ್ಪ, ದೊಡ್ಡಬೊಮ್ಮನಹಳ್ಳಿ ಬಸಣ್ಣ, ಚಕ್ರೇಶ್, ಬಿ.ಚೌಡೇಶ್ ಸೇರಿದಂತೆ ನೂರಾರು ರೈತರು ಇದ್ದರು.