ಸುದ್ದಿವಿಜಯ, ಜಗಳೂರು: ಆರೋಗ್ಯವೇ ಭಾಗ್ಯ ಎಂಬುದು ಸರ್ವ ಕಾಲಿಕ ಸತ್ಯ. ಆರೋಗ್ಯ ಚನ್ನಾಗಿರಬೇಕಾದರೆ ಮೊದಲು ಪಂಚೇಂದ್ರಿಯಗಳನ್ನು ನಿಗ್ರಹಿಸಿಕೊಳ್ಳಬೇಕು. ಆಸೆ, ಕಾಮ, ಕ್ರೋದಗಳನ್ನು ತನ್ನ ಮನಸ್ಸಿನ ಹಿಡತದಲ್ಲಿ ಇಟ್ಟುಕೊಂಡವನು ಜನರ ಮನಸ್ಸನ್ನು ಗೆಲ್ಲುತ್ತಾನೆ. ಜನರ ಮನಸ್ಸು ಗೆದ್ದರೆ ಜಗತ್ತನ್ನು ಗೆದ್ದಂತೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಸರಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಸಹಭಾಗಿತ್ವದಲ್ಲಿ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಹಾಗೂ ಯೋಗ ವಿಜ್ಞಾನ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಸೋಮವಾರ ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಸಭಾಗಂಣದಲ್ಲಿ ಉದ್ಘಾಟಿಸಿ ಮಾತನಾಡಿದರು.
![ಜಗಳೂರು ಪಟ್ಟಣದ ಪ್ರೇರಣಾ ಸಮಾಜ ಸೇವಾ ಸಂಸ್ಥೆ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಶಾಸಕ ಬಿ.ದೇವೇಂದ್ರಪ್ಪ ಉದ್ಘಾಟಿಸಿದರು.](http://suddivijaya.com/wp-content/uploads/2023/10/2JLR3.jpg)
ಸರ್ವೇ ಜನಾಃ ಸುಖಿನೋ ಭವಂತು ಎಂಬ ಸಂಸ್ಕೃತ ಶ್ಲೋಕದ ಅರ್ಥ ಎಲ್ಲರೂ ಸುಖವಾಗಿ ಆರೋಗ್ಯವಾಗಿ ಇರಬೇಕು ಎಂಬುದಾಗಿದೆ. ಆರೋಗ್ಯವಾಗಿರಬೇಕು ಎಂದಾದರೆ ಯೋಗ, ಧ್ಯಾನ ಆತ್ಮ ಮತ್ತು ಶರೀರಕ್ಕೆ ಬಹಳ ಮುಖ್ಯ. ಕೈ, ಬಾಯಿ, ಮನಸ್ಸು ಶುದ್ಧವಾಗಿದ್ದರೆ ತ್ರಿಮೂರ್ತಿಗಳ ಮನಸ್ಸು ಗೆದ್ದಂತೆ. ನಮ್ಮ ಜೀವನ ನಮ್ಮ ಕೈಲಿದೆ. ಎಲ್ಲರೂ ಆರೋಗ್ಯ ಕಾಪಾಡಿಕೊಂಡರೆ ಅದಕ್ಕಿಂತ ಸೌಭಾಗ್ಯ ಮತ್ತೊಂದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಶ್ವೇತಾ ಬೆಳಗಲಿ, ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಟಿಎಚ್ಒ ಡಾ.ಪಿ.ಆರ್.ವಿಶ್ವನಾಥ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಡಾ.ಪಿ.ಎಸ್.ಅರವಿಂದನ್, ಫಾದರ್ ವಿಲಿಯಂ ಮೀರಂದ್, ಫಾದರ್ ರೋನಾಡ್ಡ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಹಾಗೂ ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ, ಗಣೇಶ್ ನಾಯ್ಕ್, ಷಹೀನಾಬೇಗಂ, ಡಿಎಸ್ಎಸ್ ಸಂಚಾಲಕ ಸತೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.