ಸುದ್ದಿವಿಜಯ, ಜಗಳೂರು: ಕ್ಷೇತ್ರದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಚುನಾವಣೆ ಸಂಜೆ 6 ಗಂಟೆಗೆ ಮುಕ್ತಾಯವಾಯಿತು.
ಕ್ಷೇತ್ರದಲ್ಲಿ ಶೇ.80.16 ರಷ್ಟು ಮತದಾನವಾಗಿದೆ. ಎಲ್ಲಿಯೂ ಯಾವುದೇ ಅಹಿತರ ಘಟನೆ, ಗಲಾಟೆ, ಗದ್ದಲಗಳು ನಡೆಯದಂತೆ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದವು.
ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 192958 ಜನ ಮತದಾರರಿದ್ದು, 97690 ಪುರುಷ ಮತದಾರರು, 95257 ಮಹಿಳಾ ಮತದಾರರು, ಇತರೆ 11 ಮತದಾರರಿದ್ದಾರೆ. 262 ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವ ಮೂಲಕ ಶಾಂತಿಯುತ ಮತದಾನ ನಡೆದಿದೆ.
ದೊಣೆಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 235ರಲ್ಲಿ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಿತು. ನಿಗದಿಯಾದ 100 ಮೀ ವ್ಯಾಪ್ತಿಯಲ್ಲಿ ಸಂಜೆ 4.30ರ ನಂತರ ಏಕಾ ಏಕಿ 250ಕ್ಕೂ ಹೆಚ್ಚು ಮತದಾರರು ಸಾಲುಗಟ್ಟಿ ನಿಂತಿದ್ದರು. ಹೀಗಾಗಿ ಸಂಜೆ ಏಳು ಗಂಟೆಯವರೆಗೂ ಮತದಾನ ಪ್ರಕ್ರಿಯೆ ನಡೆಯಿತು. ಇತ್ತ ಬಿಳಿಚೋಡು ಗ್ರಾಮದ ಮತಗಟ್ಟೆಯಲ್ಲಿ ಸಂಜೆ 6.30 ಆದರೂ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಉಳಿದಂತೆ ಯಾವುದೇ ಇವಿಎಂಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿಲ್ಲ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಮತದಾನ ಮಾಡಿದ ಅಭ್ಯರ್ಥಿಗಳು:
ಕಾಂಗ್ರೆಸ್ ಅಭ್ಯರ್ಥಿ ಬಿ.ದೇವೇಂದ್ರಪ್ಪ ತಮ್ಮ ಗ್ರಾಮ ಚಿಕ್ಕಮ್ಮನಹಟ್ಟಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಮತದಾನ ಮಾಡಿದರು. ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್ ಬಿದರಕೆರೆ ಗ್ರಾಮದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ದಾವಣಗೆರೆಯ ಮಹಿಳಾ ಸೇವ ಸಮಾಜದ ಕಾಂಪ್ಲೆಕ್ಸ್ ನಲ್ಲಿ ಮತದಾನ ಮಾಡಿದರು