ಸುದ್ದಿವಿಜಯ, ಜಗಳೂರು: ವೈವಿಧ್ಯಮಯ ಬೆಳೆ ಬೆಳೆಯುವ ಜಗಳೂರಿನಲ್ಲಿ ಈ ಬಾರಿ ಕಡಲೆ ಬೆಳೆಗೆ ಪೂರಕವಾದ ವಾತಾವರಣವಿದ್ದು ರೈತರು ತಾಂತ್ರಿಕ ವಿಧಾನಗಳ ಅಳವಡಿಕೆಯಿಂದ ಹೆಚ್ಚು ಉತ್ಪಾದನೆ ಮಾಡಬಹುದು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ.ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಶುಕ್ರವಾರ 50 ಜನ ರೈತರಿಗೆ ಕೇಂದ್ರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಕಡಲೆ ಪ್ರಾತ್ಯಕ್ಷಿಕೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಕಡಲೆ ಬೆಳೆಯ ಕ್ಷೇತ್ರೋತ್ಸವದಲ್ಲಿ ಬೀಜೋತ್ಪಾದನೆಗೆ ಗಮನ ಕೊಡಿ. ಸರಿಯಾದ ಸಮಯಕ್ಕೆ ಸರಿಯಾದ ತಂತ್ರಜ್ಞಾನದ ಬಳಕೆಯಿಂದ ಕಡಲೆ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಕಾಣಬಹುದು ಎಂದರು.
![ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಕೇಂದ್ರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿ ಕಡಲೆ ಪ್ರಾತ್ಯಕ್ಷಿಕೆ ಬಗ್ಗೆ ಮಾಹಿತಿ ನೀಡಲಾಯಿತು.](http://suddivijaya.com/wp-content/uploads/2023/02/kvk-program.jpg)
ಗ್ರಾಮದ ಪ್ರಗತಿಪರ ಕೃಷಿ ಎನ್.ಎಸ್.ಸೋಮನಗೌಡ ಮಾತನಾಡಿ, ಕಡಲೆ ಬೆಳೆಯು ಶೇಕಡ 50ರಷ್ಟು ಹೂವಾಡುವ ಸಂದರ್ಭದಲ್ಲಿ ಚಿಕ್ ಪಿ ಮ್ಯಾಜಿಕ್ ಸಿಂಪರಣೆಯಿಂದ ಕಾಯಿಗಳ ಗಾತ್ರ ಹೆಚ್ಚಾಗಿದ್ದು, ಮೋಹಕ ಬಲೆಗಳ ಅಳವಡಿಕೆಯಿಂದ ಸಿಂಪರಣೆಯ ಖರ್ಚು ಕಡಿಮೆಯಾಗಿದೆ. ಇದಕ್ಕೆ ಈ ವರ್ಷದ ಬೆಳೆಯೇ ಕಾರಣ ಎಂದರು.
ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಟಿ.ಜಿ.ಅವಿನಾಶ್, ಕಾಯಿ ಕೊರಕದ ನಿರ್ವಹಣೆಗಾಗಿ emmacatin ಬೆಂಜೋಟೆ @ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಸ್ತರಣೆ ತಜ್ಞರಾದ ರಘುರಾಜ, ಪ್ರಗತಿಪರ ರೈತರಾದ ಮಂಜುನಾಥ್, ನಾಗರಾಜ್ ಸೇರಿ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.