Suddivijaya|Kannada News|31-05-2023
ಸುದ್ದಿವಿಜಯ ಜಗಳೂರು.ಶಿಕ್ಷಣದಿಂದಲೆ ಸಮಾಜವನ್ನು ಬದಲಾಯಿಸುವ ಶಕ್ತಿ ಇದೆ. ಹಾಗಾಗಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಜಗಳೂರು ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಶಿಶು ಅಭಿವೃದ್ದಿ ಯೋಜನೆಯಡಿ ಹಮ್ಮಿಕೊಂಡಿದ್ದ ಬೇಸಿಗೆ ರಜೆ ಮುಗಿಸಿ ಅಂಗನವಾಡಿ ಕೇಂದ್ರಕ್ಕೆ ಅಕ್ಕರೆಯಿಂದ ಬರುವ ಮಕ್ಕಳಿಗೆ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೀರಾವರಿ ಸೇರಿದಂತೆ ಇತರೆ ಯೋಜನೆಗಳಿಂದ ತಾಲೂಕು ಹಿಂದುಳಿದಿರಬಹುವುದು, ಆದರೆ ಶೈಕ್ಷಣಿಕವಾಗಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡುತ್ತಿದೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸತತವಾಗಿ ನಾಲ್ಕನೇ ಬಾರಿ ಪ್ರಥಮ ಸ್ಥಾನವನ್ನು ಉಳಿಸಿಕೊಂಡು ಬಂದಿರುವುದು ಸಂತಸ ತಂದಿದೆ. ಈ ಸ್ಥಾನ ನಿರಂತರವಾಗಿರಲಿ ಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಕ್ಕಳೆಂದರೆ ಮದರ್ ತೆರೆಸಾ, ನೆಹರು, ಸರ್ವಪಲ್ಲಿ ರಾಧಕೃಷ್ಣ ಅವರಿಗೆ ತುಂಬ ಅಚ್ಚು ಮೆಚ್ಚು, ಹಾಗಾಗಿಯೇ ನೆಹರು ಜನ್ಮದಿವನ್ನು ಮಕ್ಕಳ ದಿನಾಚರಣೆ, ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮ ದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ. ಆದ್ದರಿಂದ ಅಂಗನವಾಡಿ ಕೇಂದ್ರಪ್ಪ ಬರುವ ಪುಟಾಣಿಗಳನ್ನು ತಮ್ಮ ಮಕ್ಕಳಂತೆ ಲಾಲನೆ, ಪಾಲನೇ ಮಾಡಬೇಕು ಎಂದರು.
ಕಳ್ಳಾಟ ಮಾಡುವ ಅಧಿಕಾರಿಗಳೇ ಎಚ್ಚರ:
ನಾನು ಕ್ಷೇತ್ರ ಅಭಿವೃದ್ದಿಗೆ ಅಪಾರ ಆಸೆ ಇಟ್ಟುಕೊಂಡು ಬಂದಿದ್ದೇನೆ, ನಾನು ಮಲಗುವುದಿಲ್ಲ, ಕಳ್ಳಾಟ ಮಾಡುವ ಅಧಿಕಾರಿಗಳನ್ನು ಮಲಗಲು ಬಿಡುವುದಿಲ್ಲ. ಸರ್ಕಾರದಿಂದ ಬರುವ ಎಲ್ಲಾ ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸುವ ಕೆಲಸ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಬರುವ ಎಲ್ಲಾ ಆಹಾರ ಪದಾರ್ಥಗಳು ಸಮರ್ಪಕವಾಗಿ ಪೂರೈಕೆಯಾಗಬೇಕು. ತಪ್ಪು ಕಂಡು ಬಂದರೆ ನಾನು ಸಹಿಸುವುದಿಲ್ಲ ಅದಕ್ಕೆ ದಂಡನೆ ಅನುಭವಿಸಬೇಕು ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ ಪಾಲಯ್ಯ ಮಾತನಾಡಿ, ಮಕ್ಕಳ ಮುಂದಿನ ಪ್ರಜೆಗಳಾಗುತ್ತಾರೆ. ಇಲಾಖೆ ಉತ್ತಮವಾಗಿಕೆಲಸ ಮಾಡಬೇಕು. ಸರ್ಕಾರ ಮಾತು ಕೊಟ್ಟಂತೆ ಭರವಸೆಯನ್ನು ಈಡೇರಿಸುತ್ತದೆ. ಅಂಗನವಾಡಿ ಬಗ್ಗೆ ತುಂಬ ದೂರುಗಳು ಕೇಳಿ ಬರುತ್ತವೆ. ಅದನ್ನು ತೊಡೆದುಹಾಕುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅದ್ದೂರಿ ಸ್ವಾಗತ:
ಶಾಸಕರಾಗಿ ಆಯ್ಕೆಯಾದ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ತೆರಳಿದಾಗ ಕಾರ್ಯಕರ್ತೆಯರು, ಸಹಾಯಕಿಯರು ಆರತಿ ಬೆಳಗುವ ಮೂಲಕ ಸ್ವಾಗತಿಸಿಕೊಂಡರು. ಅಲ್ಲದೇ ಅಲ್ಲಿದ್ದ ಪುಟಾಣಿಗಳ ಜತೆ ಕೆಲ ನಿಮಿಷ ಬೆರತು ಮುದ್ದಾಡಿದರು. ನಂತರ ಮಕ್ಕಳೊಂದಿ ನಿಂತು ಪೊಟೊ ತೆಗೆಸಿಕೊಂಡರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಕಲ್ಲೇಶ್ ರಾಜ್ ಪಟೇಲ್, ಸಿ. ತಿಪ್ಪೇಸ್ವಾಮಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಖರಪ್ಪ, ಪ.ಪಂ ಸದಸ್ಯರಾದ ರವಿಕುಮಾರ್, ಮಹಮದ್ ಅಲಿ, ಪಲ್ಲಾಗಟ್ಟೆ ಶೇಖರಪ್ಪ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಬೀರೇಂದ್ರಪ್ಪ, ಮಹಮದ್ ಗೌಸ್, ತಿಮ್ಮಣ್ಣ, ಅಂಗನವಾಡಿ ಮೇಲ್ವಿಚಾರಕರಾದ ರೇಖಾ ನಾಡಿಗಾರ್ ಶಾಂತಮ್ಮ,ಮುತ್ತಮ್ಮ, ಅನುರಾಧ ಸೇರಿದಂತೆ ಮತ್ತಿತರಿದ್ದರು.