ಸುದ್ದಿವಿಜಯ, ಜಗಳೂರು: ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಇರುವ ಇಂಡಿಕ್ಯಾಷ್ ಎಟಿಎಂನಲ್ಲಿ ಅನೈತಿಕ ಚಟುವಟಿಕೆಗಳ ಆಗರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಗ್ರಾಮದ ಭರಮಸಾಗರ ರಸ್ತೆಯಲ್ಲಿರುವ ಎಟಿಎಂ ಕೇಂದ್ರದಲ್ಲಿ ಯಾವುದೇ ವ್ಯವಸ್ಥೆಯಿಲ್ಲ. ಎಟಿಎಂ ಮಷೀನ್ ಕೆಟ್ಟು ಅದೆಷ್ಟೋದಿನಗಳಾಗಿವೆ. ಅದಕ್ಕೆ ಸಂಬಂಧಿಸಿದ ಸಿಬ್ಬಂದಿಗಳಾಗಲಿ ಇತ್ತಕಡೆ ತಿರುಗಿ ನೋಡಿಲ್ಲ.
![ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದಲ್ಲಿ ಇರುವ ಏಕೈಕ ಇಂಡಿಕ್ಯಾಷ್ ಎಟಿಎಂ ಕೇಂದ್ರ ಅನೈತಿಕ ಚಟುವಟಿಕೆಗಳ ತಾಣವಾಗಿದೆ.](http://suddivijaya.com/wp-content/uploads/2023/05/18a65d9a-d594-4411-8f7d-c3c538663962.jpg)
ಎಟಿಎಂ ಕೇಂದ್ರವಿದೆ ಎಂದು ಮಧ್ಯರಾತ್ರಿ ತುರ್ತು ಹಣ ಡ್ರಾಮಾಡಲು ಬಂದರೆ ಸಾರ್ವಜನಿಕರಿಗೆ ದರ್ಶನವಾಗುವುದು ಕೆಟ್ಟುನಿಂತ ಎಟಿಎಂ ಯಂತ್ರ. ಜೊತೆಗೆ ಕುಡಿದು ಬಿಸಾಕಿರುವ ಬಾಟಲ್ಗಳು, ಗುಟ್ಕಾ ಸ್ಯಾಚೆಟ್ಗಳು, ಕಸದ ರಾಶಿ, ಜಾಡುಕಟ್ಟಿರುವ ಗೋಡೆಗಳು ಮಾತ್ರ.
ತುರ್ತು ಹಣ ಬೇಕು ಎಂದು ಬಂದವರಿಗೆ ಈ ಕೇಂದ್ರಲ್ಲಿ ಸಿಗುವುದು ಬೇಡವಾದ ವಸ್ತು. ಈ ಗ್ರಾಮದಲ್ಲಿ ಇರುವುದು ಏಕೈಕ ಎಟಿಎಂ ಮಷೀನ್. ಅದನ್ನು ಹೊರತು ಪಡಿಸಿದರೆ ಮತ್ತೊಂದಿಲ್ಲ. ಗ್ರಾಹಕರು ಹಣಕ್ಕಾಗಿ ಜಗಳೂರು ಪಟ್ಟಣ ಇಲ್ಲವೇ ಭರಮಸಾಗರಕ್ಕೆ ಹೋಗಬೇಕು.
ಈ ಎಟಿಎಂ ಕೇಂದ್ರ ಅವ್ಯವಸ್ಥೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಅಳವಡಸಲಾಗಿರುವ ಸಿಸಿಟಿವಿ ಕೆಟ್ಟು ಹೋಗಿದ್ದು ಸಂಬಂಧಪಟ್ಟ ಏಜೆನ್ಸಿ ಅಥವಾ ಬ್ಯಾಂಕ್ ಸಿಬ್ಬಂದಿ ಇತ್ತ ಕಡೆ ತಿರುಗಿ ನೋಡದೇ ಇರುವುದರಿಂದ ಈ ಎಟಿಎಂ ಕೇಂದ್ರ ಅನೈತಿಕ ಚಟುವಟಿಕೆ ತಾಣವಾಗಿದೆ. ಭದ್ರತಾ ಸಿಬ್ಬಂದಿ ಇಲ್ಲದೇ ಇರುವುದರಿಂದ ಎಟಿಎಂ ಯಂತ್ರಕ್ಕೂ ಭದ್ರತೆಯಿಲ್ಲವಾಗಿದೆ ಎಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.