ಸುದ್ದಿವಿಜಯ, ಜಗಳೂರು:ಹಿಂದುಳಿದ ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಜಗಳೂರು ತಾಲೂಕು ಚಿತ್ರದುರ್ಗ ಜಿಲ್ಲೆಗೆ ಮರು ಸೇರ್ಪಡೆ ಹೋರಾಟ ಸಮಿತಿ ವತಿಯಿಂದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಸೈಯದ್ ಖಲಿಂವುಲ್ಲಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು, ನೂರಾರು ವರ್ಷಗಳ ಇತಿಹಾಸದಲ್ಲಿ 75 ವರ್ಷಗಳ ಕಾಲ ಬರಗಾಲ ಕಂಡ ಪ್ರದೇಶವಾಗಿದೆ. ಯಾವುದೇ ನದಿ, ನೀರಿನ ಮೂಲಗಳಿಲ್ಲ.
ರೈಲು ಓಡಾಟವಿಲ್ಲ. ಉದ್ಯೋಗ ಒದಗಿಸುವ ಕಂಪನಿಗಳಿಲ್ಲ. ಕೇವಲ ಮಳೆಯನ್ನೆ ನೆಚ್ಚಿಕೊಂಡು ಕೃಷಿ ಚಟುವಟಿಕೆ ಮಾಡುವ ರೈತರು ಸಂಕಷ್ಟದಲ್ಲಿ ಬದುಕುವಂತಾಗಿದೆ.
ಹಾಗಾಗಿ ಮೂಲ ಚಿತ್ರದುರ್ಗಕ್ಕೆ ಸೇರ್ಪಡೆಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಗೆ ಜಗಳೂರು ಸೇರಿಕೊಂಡು ಬಡವಾಗಿದೆ. ಚುನಾಯಿತರು, ಅಧಿಕಾರಿಗಳು ಮಲತಾಯಿ ಧೋರಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ದಾವಣಗೆರೆ, ಚನ್ನಗಿರಿ, ಹೊನ್ನಾಳಿ, ಹರಿಹರ ತಾಲೂಕುಗಳು ನೀರಾವರಿ ಹೊಂದಿರುವ ಸಮೃದ್ದ ತಾಲೂಕಗಳಾಗಿವೆ. ಇವರ ನಡುವೆ ಜಗಳೂರು ತಾಲೂಕು ಹೋರಾಟ ಮಾಡುವುದು ತುಂಬ ಕಷ್ಟವಾಗುತ್ತಿದೆ.
ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೆ ದಾವಣಗೆರೆಯಲ್ಲಿ ದಿನವಿಡಿ ಕಾಯಬೇಕು ಆದರೆ ಚಿತ್ರದುರ್ಗದಲ್ಲಿ ಅಲೆದಾಡುವುದು ತುಂಬ ಕಡಿಮೆಯಾಗುತ್ತದೆ.
ಆದ್ದರಿಂದ ಚಿತ್ರದುರ್ಗ ಸೇರ್ಪಡೆಯಾಗುವವರೆಗೂ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ತಿಮ್ಮಾರೆಡ್ಡಿ, ಉಪಾಧ್ಯಕ್ಷ ಪುಟ್ಟಣ್ಣ, ಸಿ. ತಿಪ್ಪೇಸ್ವಾಮಿ, ಪಾಲನಾಯಕನಗೋಟೆ ಓಬಣ್ಣ, ಸೂರಲಿಂಗಪ್ಪ, ಹನುಮಂತಪ್ಪ, ಖಾದರ್ ಸಾಬ್, ಬಂಗಾರಪ್ಪ, ಜಿ.ಎಚ್ ಶಂಬುಲಿಂಗಪ್ಪ, ವಕೀಲ ಸಣ್ಣ ಓಬಯ್ಯ, ದಸಂಸ ಸಂಚಾಲಕ ಸತೀಶ್ ಮಾಚಿಕೆರೆ, ಸೇರಿದಂತೆ ಮತ್ತಿತರಿದ್ದರು.