ಜಗಳೂರು ಕ್ಷೇತ್ರದ ಕೈ ಟಿಕೆಟ್‍ಗಾಗಿ ತೆರೆ ಮರೆಯ ಕಸರತ್ತು, ಯಾರಿಗೆ ಟಿಕೆಟ್?

Suddivijaya
Suddivijaya April 1, 2023
Updated 2023/04/01 at 2:02 PM

ಸುದ್ದಿವಿಜಯ, ಜಗಳೂರು:(ವಿಶೇಷ): ಈಗಾಗಲೇ ಚುನಾವಣೆ ಮೇ.10ಕ್ಕೆ ಘೋಷಣೆಯಾಗಿದೆ. ಕಾಂಗ್ರೆಸ್ ಪಕ್ಷದಿಂದ 125 ಕ್ಷೇತ್ರಗಳಿಗೆ ಅಭ್ಯರ್ಥಿ ಯಾರೆಂದು ಹೈಕಮಾಂಡ್ ಟಿಕೆಟ್ ಘೋಷಣೆಯೂ ಮಾಡಿದೆ. ಆದರೆ ಎಸ್‍ಟಿ ಮೀಸಲು ಕ್ಷೇತ್ರವಾಗಿರುವ ಜಗಳೂರು ವಿಧಾನಸಭಾ ಕ್ಷೇತ್ರದ ‘ಕೈ’ ಟಿಕೆಟ್ ಯಾರಿಗೆ ?ಎಂದು ಇದುವರೆಗೂ ಘೋಷಣೆಯಾಗದೇ ಇರುವುದು ಟಿಕೆಟ್ ಆಕಾಂಕ್ಷಿಗಳಿಗೆ ತಲೆನೋವಾಗಿದೆ.

ಹೌದು, ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಕ್ಷೇತ್ರದ ಆರು ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಅದರಲ್ಲಿ ಪ್ರಮುಖವಾಗಿ ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಕಳೆದ ಒಂದು ವರ್ಷದ ಹಿಂದೆ ಜೆಡಿಎಸ್‍ನಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ, ಬಸವಾಪುರ ರವಿಚಂದ್ರ, ಪುಷ್ಪಾಲಕ್ಷ್ಮಣ ಸ್ವಾಮಿ, ಎಂ.ಹನುಮಂತಪ್ಪ ಟಿಕೆಟ್‍ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಅರ್ಧ ಡಜನ್ ಅಭ್ಯರ್ಥಿಗಳಿಗೆ ಯಾರಿಗೆ ಟಿಕೆಟ್?:
ಸದ್ಯಕ್ಕೆ ಟಿಕೆಟ್‍ಗಾಗಿ ಪ್ರಬಲ ಪೈಪೋಟಿಯಲ್ಲಿರುವುದು ಮಾಜಿ ಶಾಸಕ ಎಚ್.ಪಿ.ರಾಜೇಶ್, ಜಿಪಂ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ, ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಮತ್ತು ಎಸ್‍ಟಿ ಕ್ಷೇತ್ರಗಳಲ್ಲಿ ಮಹಿಳಾ ಕೋಟದ ಅಡಿಯಲ್ಲಿ ಟಿಕೆಟ್ ಕೊಡಲೇ ಬೇಕು ಎಂದು ಪಟ್ಟು ಹಿಡಿದಿರುವ ಪುಷ್ಪಾ ಲಕ್ಷ್ಮಣಸ್ವಾಮಿ ಅವರು ಮುಂಚೂಣೆಯಲ್ಲಿದ್ದಾರೆ.

ಅರಸಿಕೆರೆ ಹೋಬಳಿಯ ಏಳು ಗ್ರಾಪಂಗಳು ಸೇರಿದಂತೆ ಒಟ್ಟು 29 ಗ್ರಾಪಂಗಳಲ್ಲಿ ಹಾಲಿ ಶಾಸಕ ಎಸ್.ವಿ.ರಾಮಚಂದ್ರ ಅವರು ಡಬಲ್ ಎಂಜಿನ್ ಸರಕಾರವಿದ್ದರೂ ಏನೂ ಅಭಿವೃದ್ಧಿ ಮಾಡಿಲ್ಲ. ಕೆರೆ ತುಂಬಿಸುವ ಯೋಜನೆಗೆ ಸಿದ್ದರಾಮಯ್ಯ ಅವರ ಸರಕಾರ 2018ರಲ್ಲಿ ಜಗಳೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದು ಕಾಂಗ್ರೆಸ್ ಸರಕಾರ.

ನಾನು ಶಾಸಕನಾಗಿದ್ದ ಅವಧಿಯಲ್ಲಿ 57 ಕೆರೆಗಳ ಭರ್ತಿ ಯೋಜನೆ ಆರಂಭವಾಯಿತು, ರಸ್ತೆ, ನೀರು, ಸೂರು, ಮೂಲ ಸೌಕರ್ಯ ಅಭಿವೃದ್ಧಿ ಮಾಡಿದಷ್ಟು ಈಗಿನ ಶಾಸಕರು ಮಾಡಿಲ್ಲ ಎಂದು ಕ್ರೆಡಿಟ್ ಬಿಜೆಪಿ ಪಾಲಾಗದಂತೆ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ.

ಎಚ್.ಪಿ.ರಾಜೇಶ್ ಅವರು ಟಿಕೆಟ್‍ಗಾಗಿ ರೇಸ್‍ನಲ್ಲಿ ಮೊದಲಿಗರಾಗಿದ್ದಾರೆ. ಇನ್ನು ಕಳೆದ ಬಾರಿ ಮೊದಲಿಗೆ ಪುಷ್ಪ ಲಕ್ಷ್ಮಣಸ್ವಾಮಿ ಅವರಿಗೆ ಬಿ ಫಾರಂ ದೊರೆತಿತ್ತು. ಆದರೆ, ಕ್ಷೇತ್ರದಲ್ಲಿ ರಾಜೇಶ್ ಅಭಿಮಾನಿಗಳು ನಡೆಸಿದ ಹೋರಾಟದ ಕಾರಣಕ್ಕೆ ಕೊನೆ ಕ್ಷಣಕ್ಕೆ ರಾಜೇಶ್ ಅವರಿಗೆ ಟಿಕೆಟ್ ದಕ್ಕಿತ್ತು. ಆದರೂ ಸಹ ಈ ಬಾರಿ ಪುಷ್ಪಾ ಲಕ್ಷ್ಮಣಸ್ವಾಮಿ ಅವರು ಎಸ್‍ಟಿ ಮೀಸಲು ಕ್ಷೇತ್ರಗಳ ಮಹಿಳಾ ಮೀಸಲಾತಿ ಅಡಿ ವರಿಷ್ಠರನ್ನು ಟಿಕೆಟ್ ಕೇಳುತ್ತಿದ್ದಾರೆ.

ಇತ್ತ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು ಟಿಕೆಟ್ ಸಿಕ್ಕೇಸಿಗುತ್ತದೆ ಎಂಬ ಭರವಸೆಯಿಂದ ಇದ್ದಾರೆ. ಅವರಿಗೆ ರಾಜ್ಯಮಟ್ಟದ, ಕೇಂದ್ರ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ವರಿಷ್ಠರಿಂದಲೂ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ಶೇ.100 ರಷ್ಟು ಭರವಸೆ ನೀಡಿದ್ದಾರಂತೆ.

ಹೀಗಾಗಿ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಪ್ರತಿ ನಿತ್ಯ ಮದುವೆ, ತಿಥಿ, ಸಾವು ಹೀಗೆ ಏನೇ ಕೆಟ್ಟ, ಒಳ್ಳೆಯ ಕಾರ್ಯಗಳಾದರೂ ಆ ಗ್ರಾಮಗಳಿಗೆ ದೇವೇಂದ್ರಪ್ಪ ಅವರು ಹಾಜರಾತಿ ಇದ್ದೇ ಇರುತ್ತದೆ. ಈಗಾಗಲೇ ಕ್ಷೇತ್ರದಾದ್ಯಂತ ಸುತ್ತುತ್ತಿದ್ದು ಟಿಕೆಟ್ ಸಿಕ್ಕರೆ ಗೆದ್ದೆಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸದಿಂದ ಎಲ್ಲ ವರ್ಗದ ಜನ ನಾಯಕರ ಜೊತೆ ಸ್ನೇಹ ಸಂಪಾದಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಇನ್ನು ಜಿಪಂ ಮಾಜಿ ಸದಸ್ಯ ಹಾಗೂ ಕೆಪಿಸಿಸಿ ಎಸ್‍ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಅವರಿಗೆ ಟಿಕೆಟ್ ಸಿಗುವ ಭರವಸೆಯನ್ನು ಎಸ್‍ಟಿ ಸಮುದಾಯದ ನಾಯಕರಾದ ಸತೀಶ್ ಜಾರಕಿಹೊಳಿ ಅವರು ನೀಡಿದ್ದಾರೆ ಎನ್ನಲಾಗಿದೆ.

ಕಾರಣ ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಪಾಲಯ್ಯ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಅವರು ಪಕ್ಷ ನಿಷ್ಠರಾಗಿದ್ದಾರೆ. ಕ್ಷೇತ್ರದಲ್ಲಿ ಅವರದ್ದೇ ಆದ ವರ್ಚಸ್ಸು ಹೊಂದಿದ್ದಾರೆ. ಸಾಂಪ್ರದಾಯಕ ಮತಗಳನ್ನು ಅವರು ಹೊಂದಿದ್ದಾರೆ ಎಂಬುದು ವರಿಷ್ಠರಿಗೆ ಮನವರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿಯಲ್ಲಿ ಪಾಲಯ್ಯ ಅವರು ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ಟಿಕೆಟ್ ಫೈನಲ್?
ರಾಜ್ಯ ಕಾಂಗ್ರೆಸ್ 125 ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಹಂಚಿಕೆ ಮಾಡಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ 2ನೇ ಪಟ್ಟಿ ಬಿಡುಗಡೆಗೆ ಮಾಡಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಮೋಹನ್ ಪ್ರಕಾಶ್ ಅಧ್ಯಕ್ಷತೆಯಲ್ಲಿ ಕಳೆದ ಗುರುವಾರ ರಾತ್ರಿ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಾಕಿ ಇರುವ 100 ಕ್ಷೇತ್ರಗಳ ಪೈಕಿ 70 ಕ್ಷೇತ್ರಗಳಿಗೆ ಏಕವ್ಯಕ್ತಿ ಹೆಸರು ಅಂತಿಮಗೊಳಿಸಿದ್ದು,

30 ಕ್ಷೇತ್ರಗಳಲ್ಲಿ ಮಾತ್ರವೇ ಇಬ್ಬರು ಆಕಾಂಕ್ಷಿಗಳ ಸಂಭವನೀಯರ ಪಟ್ಟಿ ಸಿದ್ಧಪಡಿಸಲಾಗಿದೆ. 70 ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಇತ್ಯಾರ್ಥವಾಗಲಿದೆಯಾ ಕಾದು ನೋಡಬೇಕಿದೆ. ಹಾಗಾಗಿ ಟಿಕೆಟ್ ಆಕಾಂಕ್ಷಿಗಳು ತೆರೆ ಮರೆಯ ಕಸರತ್ತು ನಡೆಸುತ್ತಿದ್ದಾರೆ. ಹಾಗಾಗಿ ಅನೇಕರು ಬೆಂಗಳೂರಿನಲ್ಲೇ ಬೀಡು ಬಿಟ್ಟಿದ್ದಾರೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!