ಸುದ್ದಿವಿಜಯ, ಜಗಳೂರು: ನಾಮಪತ್ರ ಸಲ್ಲಿಕೆಗೆ ಕಡೆದಿನವಾದ ಇಂದು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಅವರು ಗುರುವಾರ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯಲ್ಲಿ ಭಾಗವಹಿಸಿ ನಂತರ ಚುನಾವಣಾಧಿಕಾರಿ ಎಸ್.ರವಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಈಶ್ವರ ಮತ್ತು ಮಾರಮ್ಮನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ ನಂತರ ತೆರೆದ ವಾಹನದಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಜೊತೆ ಸಾಗಿ ನಾಮಿನೇಷನ್ ಸಲ್ಲಿಸಿದರು.
ಈ ವೇಳೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ.
ನನಗೆ ಚುನಾವಣೆ ಹೊಸದೇನಲ್ಲ. ಈ ಬಾರಿ ಕಾಂಗ್ರೆಸ್ ಅಲೆ ರಾಜ್ಯದಾದ್ಯಂತ ಇದೆ. ಜಗಳೂರು ಕ್ಷೇತ್ರ ರಾಜಕೀಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್ಗೆ ತಳಮಟ್ಟದ ಕಾರ್ಯಕರ್ತರಿದ್ದಾರೆ.
ವರಿಷ್ಠರು ನನಗೆ ಟಿಕೆಟ್ ಕೊಟ್ಟಿದ್ದಾರೆ. ನಾನು ಚುನಾವಣೆಗೆಯಲ್ಲಿ ಅಭಿವೃದ್ಧಿ ಆಧಾರಿತ ಮತ ಕೇಳುತ್ತೇನೆ. ಈ ಬಾರಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಅದರಲ್ಲಿ ಅನುಮಾನ ಬೇಡ.
ಮಾಜಿ ಶಾಸಕ ಎಚ್.ಪಿ.ರಾಜೇಶ್ ನಿಮ್ಮ ಎದುರು ನಿಂತಿದ್ದಾರೆ ಹೇಗೆ ಎದುರಿಸಲು ತಂತ್ರಗಾರಿಕೆ ಮಾಡಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಇದು ರಾಷ್ಟ್ರೀಯ ಪಕ್ಷ. ಇಲ್ಲಿಂದಲೇ ಅವರು ಹೋಗಿದ್ದಾರೆ ಪಕ್ಷಕ್ಕೆ ತನ್ನದೇ ಆದ ಇತಿಹಾಸವಿದೆ.
ಬಿಜೆಪಿ ನನಗೆ ಪ್ರತಿಸ್ಪರ್ಧಿ ಆದರೆ ಪಕ್ಷೇತರ ಅಭ್ಯರ್ಥಿ ನನಗೆ ಪ್ರತಿಸ್ಪರ್ಧಿಯಾಗಲಾರರು. ನಾವು ಯಾವುದೇ ರಣ ತಂತ್ರ ಮಾಡಿಲ್ಲ. ಪಕ್ಷದ ಶಕ್ತಿಯೇ ನನಗೆ ಶ್ರೀರಕ್ಷೆಯಾಗಲಿದೆ ಎಂದರು.
ಈ ವೇಳೆ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕಾಂಗ್ರೆಸ್ ಮುಖಂಡರಾದ ಪುಷ್ಪಾ ಲಕ್ಷ್ಮಣ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ರಾಜ್ ಪಟೇಲ್, ವಕೀಲರಾದ ಬಿದಕೆರೆ ನಾಗರಾಜ್ ಸೇರಿದಂತೆ ಅನೇಕರು ಇದ್ದರು.