Suddivijayanews8/5/2024
ದೇವನೂರು ಮಹಾದೇವ, ಖ್ಯಾತ ಬರಹಗಾರರು, ಚಿಂತಕರು
ಸುದ್ದಿವಿಜಯ, ವಿಶೇಷ: ಚಕ್ರವರ್ತಿಯೊಬ್ಬನಿಗೆ ಇಡೀ ಭೂಮಂಡಲವನ್ನೆಲ್ಲಾ ಗೆದ್ದು ತನ್ನ ಚಕ್ರಾಧಿಪತ್ಯ ಸ್ಥಾಪಿಸಬೇಕೆಂಬ ಬಯಕೆ.
ಅದರಂತೆ ತನ್ನ ಪಕ್ಕದ ರಾಜ್ಯದ ಮೇಲೆ ದಂಡೆತ್ತಿ ಹೋದ. ಘೋರ ಯುದ್ಧ ನಡೆದು ಲಕ್ಷಾಂತರ ಸೈನಿಕರು ಮಡಿದರು.
ಚಕ್ರವರ್ತಿ ತಾನು ಗೆದ್ದ ಹಮ್ಮಿನಲ್ಲಿ ಯುದ್ಧಭೂಮಿಯಲ್ಲಿ ಮಡಿದುರುಳಿದ ಸೈನಿಕರ ಶವಗಳತ್ತ ನೋಟ ಬೀರಿದ.
ಅವನಿಗೆ ದಿಗ್ಭ್ರಮೆಯಾಗುವ ದೃಶ್ಯವೊಂದು ಕಂಡಿತು. ಆ ನಾಡಿನ ಆದಿವಾಸಿಯೊಬ್ಬ ಹೆಣವೊಂದನ್ನು ಕಿತ್ತು ಗಬಗಬ ತಿನ್ನುತ್ತಿದ್ದ.
ಚಕ್ರವರ್ತಿಯನ್ನು ಕಂಡು ಭಯಗೊಂಡ ಆ ಆದಿವಾಸಿ ಅವನನ್ನು ಕುರಿತು ‘ಕ್ಷಮಿಸು ದೊರೆಯೇ, ಹಸಿವನ್ನು ತಾಳಲಾರದೆ ನೀನು ಹೊಡೆದುರುಳಿಸಿದ ಸೈನಿಕನ ಹೆಣವನ್ನು ತಿನ್ನುತ್ತಿದ್ದೇನೆ.
ಇದು ನಿನ್ನ ಆಹಾರ. ನಿನ್ನ ಅಪ್ಪಣೆಯಿಲ್ಲದೆ ನಾನು ತಿನ್ನುತ್ತಿರುವುದಕ್ಕೆ ಕ್ಷಮಿಸು’ ಎಂದ.
ಅದಕ್ಕೆ ಚಕ್ರವರ್ತಿ ‘ಇಲ್ಲ ನಾನು ನರಮಾಂಸ ಭಕ್ಷಕನಲ್ಲ’ ಎಂದ. ಆದಿವಾಸಿ ಹೇಳುತ್ತಾನೆ ‘ನೀನು ನರಮಾಂಸ ಭಕ್ಷಕನಲ್ಲದಿದ್ದರೆ ಇಷ್ಟೆಲ್ಲಾ ಸೈನಿಕರನ್ನು ಏಕೆ ಕೊಂದೆ.
ನಾನಾದರೋ ಹಸಿವಾದಾಗ ಮಾತ್ರ ಅಗತ್ಯಕ್ಕೆ ತಕ್ಕಂತೆ ತಿನ್ನುತ್ತೇನೆಯೇ ಹೊರತು ಹೀಗೆ ಯಾರನ್ನು ಸಾಮೂಹಿಕವಾಗಿ ಕೊಲ್ಲುವುದಿಲ್ಲ’ ಎಂದ.
ಚಕ್ರವರ್ತಿಗೆ ಮುಂದೇನು ಮಾತನಾಡಬೇಕೆಂದು ತೋಚದೆ ಬಾಯಿಕಟ್ಟಿತು.