ಸುದ್ದಿವಿಜಯ, ಜಗಳೂರು: ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.
ಪಟ್ಟಣದ ಈಶ್ವರ ದೇವಸ್ಥಾನದಿಂದ ತೆರೆದ ವಾಹನದಲ್ಲಿ ಹೊರಟ ರಾಜೇಶ್ ಅವರ ಮೆರವಣಿಗೆ ಗಾಂಧಿವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಾಲೂಕು ಕಚೇರಿಯವರೆಗೆ ಸಾಗಿತು.
![ಜಗಳೂರು ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ನಾಮತ್ರ ಸಲ್ಲಿಸಿದರು.](http://suddivijaya.com/wp-content/uploads/2023/04/IMG-20230419-WA0151.jpg)
ಅಂದಾಜು 15 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು, ಬೆಂಬಲಿಗರು, ಹಿತೈಷಿಗಳು ರಾಜೇಶ್ ಅವರಿಗೆ ನಾಮಪತ್ರ ಸಲ್ಲಿಕೆವೇಳೆ ಸಾಥ್ ನೀಡಿದರು.
ಮಧ್ಯಾಹ್ನ 2.15ಕ್ಕೆ ಸರಿಯಾಗಿ ರಾಜೇಶ್ ಅವರು ಅಧಿಕೃತವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಎಸ್.ರವಿ ಅವರಿಗೆ ನಾಮಮತ್ರ ಸಲ್ಲಿಸಿದರು.
ಇತಿಹಾಸ ಸೃಷ್ಟಿಸಿದ ಮೆರವಣಿಗೆ:
2011ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜೇಶ್ ಅವರು ನಾಮಪತ್ರ ಸಲ್ಲಿಸಿದ್ದ ವೇಳೆ ಇದೇ ಪ್ರಮಾಣದಲ್ಲಿ ಬೆಂಬಲಿಗರು ಸಾಥ್ ನೀಡಿದ್ದರು. ಆದರೆ ಈ ಭಾರಿ ಹಿಂದಿನ ದಾಖಲೆಗಳನ್ನು ಮುರಿದು ರಾಜೇಶ್ ಅವರಿಗೆ ಅಪಾರ ಅಭಿಮಾನಿಗಳು ಬೆಂಬಲ ನೀಡಿದರು.
ಕಾರು, ಬೈಕ್, ಟ್ರ್ಯಾಕ್ಟರ್ಗಳು, ಬಸ್ಗಳಲ್ಲಿ ಕ್ಷೇತ್ರದ ಪ್ರತಿಯೊಂದು ಹಳ್ಳಿಗಳಿಂದ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಆಗಮಿಸಿ ಪಕ್ಷೇತರ ಅಭ್ಯರ್ಥಿಗೆ ಸಾಥ್ ನೀಡಿದರು.
ಗಾಂಧಿವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರಮಾಣದಲ್ಲಿ ಪಟಾಕಿಸಿ ಸಿಡಿಸಿ ರಾಜೇಶ್ ಪರ ಅಭಿಮಾನಿಗಳು ಘೋಷಣೆ ಕೂಗಿದರು.
ನಾಮಮತ್ರ ಸಲ್ಲಿಸಿದ ನಂತರ ಮಾತನಾಡಿದ ಅವರು, ಇದು ಸ್ವಾಭಿಮಾನದ ಅಭಿಮಾನಿಗಳ ಅಲೆ.
ಇಷ್ಟೊಂದು ಜನ ಬಂದಿರುವುದು ನನ್ನ ಗೆಲುವಿಗೆ ಸ್ಪೂರ್ತಿಯಾಗಿದೆ. ಕಾಂಗ್ರೆಸ್ ಪಕ್ಷದಿಂದ ನನಗೆ ಅನ್ಯಾಯವಾಗಿದೆ. ಹಾಗಾಗಿ ಜನರು ಪ್ರೀತಿಯಿಂದ ನನ್ನನ್ನು ಬೆಂಬಲಿಸಿದ್ದಾರೆ. ಈ ಬಾರಿ ಗೆಲುವ ವಿಶ್ವಾಸದಲ್ಲಿದ್ದೇನೆ ಎಂದರು.