ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ಉಳಿದು ನಿರಂತರ ಕಲಿಕೆಯಿಂದ ಉತ್ತಮ ಜ್ಞಾನಾರ್ಜನೆ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿರಿ ಎಂದು ತಾಪಂ ಇಓ ಚಂದ್ರಶೇಖರ್ ಕಿವಿಮಾತು ಹೇಳಿದರು.
ತಾಲೂಕಿನ ದೊಣ್ಣೆಹಳ್ಳಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕಲಿಕಾ ಚೇತರಿಕೆ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ಜರುಗುವ ಕಲಿಕಾ ಹಬ್ಬ ಖಾಸಗಿ ಶಾಲೆಗಳಲ್ಲಿ ಜರುಗುವ ವಾರ್ಷಿಕೋತ್ಸವ ಕಾರ್ಯಕ್ರಮದ ಭಾಸವಾಗುತ್ತದೆ. ಮರುವು ದೇವರು ಕೊಟ್ಟ ಶಾಪ ಆದರೆ ಪ್ರೌಢಶಾಲೆ ಹಂತದ ಕಲಿಕೆ ದಶಕಗಳ ಕಾಲ ಸ್ಮøತಿಯಾಗಿರುತ್ತದೆ. ಶಿಕ್ಷಕರ ಬೋಧನೆ ಹಾಲಿದ್ದಂತೆ ಅದಕ್ಕೆ ಕ್ಷಣಿಕ ಆಯುಸ್ಸು. ಆದರೆ ಅದನ್ನೇ ತುಪ್ಪವನ್ನಾಗಿಸಿಕೊಂಡರೆ ದೀರ್ಘಾ ಆಯಸ್ಸು ಎಂದು ನಿದರ್ಶನ ನೀಡಿದರು.
![ಜಗಳೂರು ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಕಲಿಕಾ ಚೇತರಿಕೆ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಕ್ಲಷ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು.](http://suddivijaya.com/wp-content/uploads/2023/01/kalika-chetarike-program-2.jpg)
ಬಿಇಓ ಉಮಾದೇವಿ ಮಾತನಾಡಿ,ಮಕ್ಕಳಲ್ಲಿ ಸ್ವಯಂ ಕಲಿಕಾ ಚಟುವಟಿಕೆ ಆಧಾರಿತ ಪರಿಣಾಮಕಾರಿ ಶಿಕ್ಷಣಕ್ಕೆ ಕಲಿಕಾ ಹಬ್ಬ ಪೂರಕ ವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ತಾಲೂಕಿನ ವಿವಿಧ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಹಂತಹಂತವಾಗಿ ತರಬೇತಿ ನಡೆಸಲಾಗುತ್ತಿದೆ. ದೊಣ್ಣೆಹಳ್ಳಿ ಗ್ರಾಮದ ಕಲಿಕಾ ಹಬ್ಬದ ಸಂಭ್ರಮ, ಮೆರವಣಿಗೆ, ಅದ್ದೂರಿ ಸ್ವಾಗತ ಕಂಡು ಕೆಲಕಾಲ ಮೂಕಪ್ರೇಕ್ಷಕಳಾದೆ ಎಂದು ಸಂತಸ ವ್ಯಕ್ತಪಡಿಸಿದರು.
ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ ಆಕ್ರಮಣದ ಹಿನ್ನೆಲೆ ಭೌತಿಕ ತರಗತಿಗಳ ಕೊರತೆಯಿಂದ ಕಲಿಕಾ ಪ್ರಗತಿ ಕುಂಠಿತವಾಗಿತ್ತು. ಪ್ರಸಕ್ತವಾಗಿ ಸರಕಾರ ಕಲಿಕಾ ಹಬ್ಬದ ಕಾರ್ಯಕ್ರಮದ ಮೂಲಕ ವಿಮರ್ಶಾತ್ಮಕ, ವೈಜ್ಞಾನಿಕ, ಅನ್ವಯಿಕ ಕೌಶಲ್ಯಗಳನ್ನು ಮೂಡಿಸುತ್ತಿದೆ.
ಇದರಿಂದ ಭಾಷಾ, ಕೌಶಲ್ಯ, ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ವೇಳೆ ಕಲಿಕಾ ಚೇತರಿಕೆಯ ಪ್ರಾತ್ಯಕ್ಷಿಕೆ ಅನಾವರಣಗೊಳಿಸಿದರು.
ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಬಸವರಾಜ್, ಸದಸ್ಯರಾದ ರಾಮು, ಗುರುಮೂರ್ತಿ, ಸಾವಿತ್ರಮ್ಮ, ಶಿಕ್ಷಕರ ಸಂಘದ ಜಗನ್ನಾಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ಜ್ಞಾನೇಂದ್ರಪ್ಪ, ಪಿಡಿಓ ಹನುಮಂತಪ್ಪ, ಉಪಪ್ರಾಂಶುಪಾಲ ಹಾಲಪ್ಪ,ಸಹಶಿಕ್ಷಕರ ಸಂಘದ ಮಹಾಂತೇಶ್, ಅಕ್ಷರದಾಸೋಹ ಅಧಿಕಾರಿ ಶ್ರೀನಿವಾಸ್, ಮೊರಾರ್ಜಿ ವಸತಿ ಶಾಲೆ ಪ್ರಾಂಶುಪಾಲ ಕಲ್ಲೇಶ್, ಮುಖ್ಯಶಿಕ್ಷಕರಾದ ವಿರೇಶ್,ಗೀತಾ ಚಂದ್ರಪ್ಪ,ಸೇರಿದಂತೆ ಉಪಸ್ಥಿತರಿದ್ದರು.