Suddivijaya|Kannada News|09-06-2023
ಸುದ್ದಿವಿಜಯ ಜಗಳೂರು.ತಾಲೂಕಿನ ಅಣಬೂರು ಗ್ರಾಮದ ಜಮೀನೊಂದರಲ್ಲಿ ಬಿತ್ತನೆ ಹೊಗಿದ್ದ ರೈತರಿಬ್ಬರು ಸಿಡಿಲು ಬಡಿದು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಅಣಬೂರು ಗ್ರಾಮದ ಕಾಟಪ್ಪ (40), ರಾಜಪ್ಪ(35) ಮೃತ ರೈತರು. ಬಿತ್ತನೆಗೆ ಸಕಾಲವಾಗಿರುವುದರಿಂದ ತಮ್ಮ ಜಮೀನಿನಲ್ಲಿ ಕಾಟಪ್ಪ, ರಾಜಪ್ಪ ಜತೆಗೆ ಐದಾರು ಜನರು ಹತ್ತಿ ಬಿತ್ತನೆ ಮಾಡುತ್ತಿದ್ದಾಗ ಸಂಜೆ ಭಾರಿ ಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಶುರುವಾಗಿದೆ. ತಕ್ಷವೇ ರಕ್ಷಣೆಗಾಗಿ ಮರಗಳ ಸಮೀಪಕ್ಕೆ ಹೋಗಿದ್ದಾರೆ. ಇದರಲ್ಲಿ ಕಾಟಪ್ಪ, ರಾಜಪ್ಪ ಒಂದೇ ಮರದ ಕೆಳಗೆ ನಿಂತಿದ್ದಾರೆ. ಏಕಾಏಕಿ ಬಡಿದ ಸಿಡಿಲಿಗೆ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಕ್ಕದ ಮರದ ಬಳಿ ಇದ್ದರು ಬಂದು ನೋಡಿದರೇ ಪ್ರಾಣ ಪಕ್ಷಿ ಹಾರಿ ಹೋಗಿದೆ. ಗಾಬರಿಗೊಂಡ ರೈತರು ತಹಸೀಲ್ದಾರ್ ಅವರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ:
ತಾಲೂಕಿನ ಹಾಲೇಕಲ್ಲು ಗ್ರಾಮದ ಕಾರ್ಯಕ್ರಮವೊಂದರಲ್ಲಿದ್ದ ಶಾಸಕ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರಿಗೆ ಸಾವಿನ ಸುದ್ದಿ ತಿಳಿಯುದ್ದಂತೆ ತಕ್ಷಣವೇ ಅಲ್ಲಿಂದ ಜಗಳೂರಿಗೆ ತೆರಳಿ ತಹಸೀಲ್ದಾರ್ ಸಂತೋಷ್ಕುಮಾರ್, ಸಿಪಿಐ ಶ್ರಿನಿವಾಸ್ ಅವರನ್ನು ಜತೆಗೆ ಕರೆದುಕೊಂಡು ಅಣಬೂರು ಗ್ರಾಮದ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಅಕ್ಕ ಪಕ್ಕದಲ್ಲಿದ್ದ ಶವಗಳನ್ನು ಕಂಡು ಮರುಗಿದರು. ಅಲ್ಲಿದ್ದ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಮೃತರಿಬ್ಬರಿಗೂ ವೈಕ್ತಿಕವಾಗಿ ಶಾಸಕರು ತಲಾ 25 ಸಾವಿರರೂಗಳನ್ನು ನೀಡುವ ಮೂಲಕ ಧೈರ್ಯ ತುಂಬಿದರು. ಸರ್ಕಾರ ರೈತರ ಪರವಾಗಿ ತಮಗೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದರು.
ಮೃತ ಇಬ್ಬರ ಕುಟುಂಬಕ್ಕೂ ಅನ್ಯಾಯವಾಗಬಾರದು ವಿಪತ್ತು ಪರಿಹಾರ ನಿದಿಯಡಿ ಪರಿಹಾರದ ಹಣವನ್ನು ತಲುಪಿಸಲು ಕ್ರಮಕೈಗೊಳ್ಳಬೇಕು. ತಕ್ಷಣ ಮಹಜರ್ ಮಾಡಿಸಿ ಸರ್ಕಾರಕ್ಕೆ ವರದಿ ಕಳಿಸಬೇಕು. ಸಿ.ಎಂ ಜತೆ ಮಾತನಾಡಿ ಆದಷ್ಟು ಬೇಗ ಪರಿಹಾರದ ಹಣ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ತಹಸೀಲ್ದಾರ್ ಸಂತೋಷ್ಕುಮಾರ್, ಸಿಪಿಐ ಶ್ರಿನಿವಾಸ್, ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಪಲ್ಶೇಲಾಗಟ್ಟೆ ಶೇಖರಪ್ಪ, ಮಹಮದ್ಗೌಸ್ ಇದ್ದರು.