ಸುದ್ದಿವಿಜಯ, ಜಗಳೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಕಾಲುಬಾಯಿ ರೋಗ ಲಸಿಕಾ ಅಭಿಯಾನ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಮಂಗಳವಾರ ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತಾಲೂಕಿನಾದ್ಯಂತ 2005ರ ಗಣತಿಯಂತೆ ಎಮ್ಮೆ ಮತ್ತು ಎತ್ತುಗಳ ಸಂಖ್ಯೆ ಸುಮಾರು 42 ಸಾವಿರ ಇದ್ದು ಅವುಗಳಿಗೆ ಕಾಲುಬಾಯಿ ರೋಗ ಬರುವುದು ಸಾಮಾನ್ಯ. ರಾಸುಗಳಿಗೆ ಕಾಣಿಸಿಕೊಳ್ಳುವ ಕಾಲುಬಾಯಿ ಜ್ವರವು ಸಾಂಕ್ರಾಮಿಕ ರೋಗ. ಹಸು,ಎಮ್ಮೆ ಮುಂತಾದ ಪ್ರಾಣಿಗಳಿಗೆ ವೈರಾಣುಗಳಿಂದ ಈ ರೋಗ ಕಾಣಿಸಿಕೊಳ್ಳುತ್ತದೆ.
ರೋಗವು ಅತಿ ಬೇಗನೆ ರೋಗಗ್ರಸ್ತ ರಾಸುಗಳಿಂದ ಇನ್ನೊಂದು ರಾಸುಗಳಿಗೆ ನೇರ ಸಂಪರ್ಕ, ಗಾಳಿ, ನೀರು, ಆಹಾರ ಮೂಲಕ ಹರುತ್ತದೆ. ಹೀಗಾಗಿ ರೈತರು ತಮ್ಮ ಜಾನುವಾರುಗಳನ್ನು ಕಾಲುಬಾಯಿ ರೋಗ ಮುಕ್ತಗೊಳಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಿ.ಜಗಳೂರು ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಬಿ.ದೇವೇಂದ್ರಪ್ಪ ಚಾಲನೆ ನೀಡಿದರು.
ನಮ್ಮ ಸರಕಾರ ವಿಶೇಷವಾಗಿ ಈ ಬಾರಿ ಅಂಬುಲೆನ್ಸ್ ವ್ಯವಸ್ಥೆ ಮೂಲಕ ರಾಸುಗಳಿಗೆ ರೋಗ ತಗುಲಿದರೆ ಕ್ಷಿಪ್ರಗತಿಯಲ್ಲಿ ಮನೆ ಮನೆಗೆ ತೆರಳಿ ರಾಸುಗಳಿಗೆ ಮನೆ ಬಾಗಿಲಿಗೆ ಚಿಕಿತ್ಸೆ ಕೊಡಿಸುವ ಕೆಲಸ ಮಾಡುತ್ತಿದೆ. ಗೊಲ್ಲರಹಟ್ಟಿ ಗ್ರಾಮದಲ್ಲಿ ಹೆಚ್ಚುನ ಸಂಖ್ಯೆಯಲ್ಲಿ ರಾಸುಗಳಿದ್ದು ಇಲ್ಲಿನ ಜನರ ಮೂಲ ಸಂಸ್ಕೃತಿ ಪಶುಪಾಲನೆಯಾಗಿದ್ದು ರಾಸುಗಳೇ ಆರ್ಥಿಕ ಮೂಲಾಧಾರವಾಗಿದ್ದು ಹೈನೋದ್ಯಮಕ್ಕೆ ಹೆಸರಾಗಿದೆ. ಗೋಮಾತೆ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಪ್ರತಿಯೊಬ್ಬರೂ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ರೈತರಿಗೆ ಕರೆ ನೀಡಿದರು.
ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಬಿ.ಲಿಂಗರಾಜು ಮಾತನಾಡಿ, ತಾಲೂಕಿನಲ್ಲಿ ಒಟ್ಟು ಐದು ಕಡೆ ರಾಸುಗಳಿಗೆ ಲಸಿಕೆ ಹಾಕಲು ತಂಡಗಳನ್ನು ರಚನೆ ಮಾಡಲಾಗಿದೆ. ಅಣಬೂರು, ಬಿಳಿಚೋಡು, ಜಗಳೂರು ಗೊಲ್ಲರಹಟ್ಟಿ, ಅಗಸನಹಳ್ಳಿ, ಬಸವಾಪುರಗಳಲ್ಲಿ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ.ಸೆ.26 ರಿಂದ ಅಕ್ಟೋಬರ್ 25ರವರೆಗೆ ನಿರಂತರವಾಗಿ ಲಸಿಕೆ ಹಾಕುವ ತಯಾರಿ ಮಾಡಿಕೊಳ್ಳಲಾಗಿದೆ. ಕಾಲುಬಾಯಿ ಜ್ವರಕ್ಕೆ ತುತ್ತಾದ ರಾಸುಗಳಲ್ಲಿ ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಗರ್ಭಧಾರಣೆ ಅವಕಾಶವೂ ಕಡಿಮೆಯಾಗಿ ಬಂಜೆತನ ಉಂಟಾಗುತ್ತದೆ. ನಾಟಿ ತಳಿ ಎತ್ತುಗಳಲ್ಲಿ ಉಳಿಮೆ ಮಾಡುವ ಸಾಮಥ್ರ್ಯ ಕಡಿಮೆಯಾಗುತ್ತದೆ. ಹೀಗಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಎಲ್ಲ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಎಂಎಫ್ ವಿಸ್ತರಣಾಧಿಕಾರಿ ರಶ್ಮಿ, ಹಿರಿಯ ಪಶುವೈದ್ಯ ಪರೀಕ್ಷಕರಾದ ಕೆ.ಎಸ್.ಶಾಂತಕುಮಾರ್, ವಿಸ್ತರಣಾಧಿಕಾರಿ ರಾಮಚಂದ್ರಪ್ಪ ಜಾನುವಾರು ಅಭಿವೃದ್ಧಿ ಅಧಿಕಾರಿ ಷಡಾಕ್ಷರಿ, ಕಿರಿಯ ಪಶುವೈದ್ಯಕೀಯ ಪರೀಕ್ಷಕರಾದ ರಾಜಭಕ್ಷಿ, ರಮೇಶ್, ವಿಶ್ವನಾಥ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಗೌಸ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಷೀರ್ ಅಹಮದ್, ಕಾನನಕಟ್ಟೆ ಪ್ರಭು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.