ನ್ಯಾ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಸಲ್ಲಿಸಲು ಆಗ್ರಹ

Suddivijaya
Suddivijaya November 15, 2023
Updated 2023/11/15 at 12:21 PM

ಸುದ್ದಿವಿಜಯ, ಜಗಳೂರು: ಪರಿಶಿಷ್ಟ ಜಾತಿ ಒಳ ಮೀಸಲು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾ. ಎ.ಜೆ.ಸದಾಶಿವ ಆಯೋಗ ಸಲ್ಲಿಸಿರುವ ವರದಿಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೆಶನದಲ್ಲಿ ಶೆಡ್ಯೂಲ್ 9ರಲ್ಲಿ ಸೇರಿಸಿ ತಕ್ಷಣ ಕೇಂದ್ರ ಸರಕಾರಕ್ಕೆ ಸಲ್ಲಿಸಬೇಕು ಎಂದು ದಲಿತ ಮುಖಂಡ ಶಂಭುಲಿಂಗಪ್ಪ ಮತ್ತು ಸಿ.ತಿಪ್ಪೇಸ್ವಾಮಿ ಆಗ್ರಹಿಸಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟರ ಮೀಸಲಾತಿ ಸೌಲಭ್ಯಗಳು ಬಲಿಷ್ಟರು ಮಾತ್ರ ಪಡೆದುಕೊಳ್ಳುತ್ತಿದ್ದಾರೆ. ಮಾದಿಗ ಮತ್ತು ಛಲವಾದಿ ಸಮುದಾಯಗಳು ಸೌಲಭ್ಯಗಳು ಪರಿಪೂರ್ಣವಾಗಿ ಹಂಚಿಕೆಯಾಗಿಲ್ಲ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಸರಕಾರ ಒಳ ಮೀಸಲಾತಿ ಸೌಲಭ್ಯ ನೀಡಲು ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ಸಭೆ ರಚನೆ ಮಾಡಲಾಗಿತ್ತು. ಆದರೆ ಕೇಂದ್ರಕ್ಕೆ ಆ ವರದಿ ಸಲ್ಲಿಕೆಯಾಗಿದೆಯೋ ಇಲ್ಲವೋ ಎಂಬುದು ಗೊತ್ತಿಲ್ಲ.

ಧರ್ಮ ಸಿಂಗ್ ನೇತೃತ್ವದ ಸರಕಾರ ನ್ಯಾ. ಎ.ಜೆ.ಸದಾಶಿವ ನೇತೃತ್ವದ ಆಯೋಗವನ್ನು ರಚನೆ ಮಾಡಿತ್ತು. ಸುಮಾರು 15 ವರ್ಷ ಕಳೆದರೂ ಪರಿಶಿಷ್ಟ ಜಾತಿಗಳ ಸಾಮಾಜಿಕ ಶೈಕ್ಷಣಿಕ ಮತ್ತು ಉದ್ಯೋಗದ ಸ್ಥಿತಿಗಳು ಈಗಲೂ ಹಾಗೇ ಇದೆ.

ಎಡಗೈ ಸಮುದಾಯಕ್ಕೆ ಶೇ.6 ರಷ್ಟು ಮತ್ತು ಬಲಗೈ ಸಮುದಾಯಕ್ಕೆ ಶೇ.5, ಸ್ಪೃಶ್ಯ ಸಮುದಾಯಕ್ಕೆ ಶೇ.3 ಹಾಗೂ ಇತರೆ ಸಮುದಾಯಗಳಿಗೆ 1ರಷ್ಟು ಮೀಸಲು ನೀಡಲು ನ್ಯಾ.ಸದಾಶಿವ ವರದಿಯಲ್ಲಿ ಶಿಫಾರಸು ಮಾಡಿತ್ತು. ಆದರೆ ಅದು ಕೇಂದ್ರದಲ್ಲಿ ಅನುಮೋದನೆ ದೊರೆಯಬೇಕು.

ತಕ್ಷಣವೇ ಶೆಡ್ಯೂಲ್ 9ರಲ್ಲಿ ಸೇರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರ ಸರಕಾರಕ್ಕೆ ಶಿಫಾರಸ್ಸಿಗೆ ಕಳುಹಿಸಬೇಕು. ನ್ಯಾ.ಸದಾಶಿವ ಆಯೋಗದ ವರದಿಯನ್ನು ಯತಾವತ್ತಾಗಿ ಜಾರಿಗೆ ಬರುವಂತೆ ಒತ್ತಡ ಹೇರಬೇಕು ಎಂದರು ಆಗ್ರಹಿಸಿದರು.

ಇದೇ ನ.18 ರಂದು ಶಾಸಕ ಬಿ.ದೇವೇಂದ್ರಪ್ಪ ಅವರಿಗೆ ಎಲ್ಲ ದಲಿತ ಮುಖಂಡರು ಸೇರಿ ನ್ಯಾ. ಎ.ಜೆ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲು ಮನವಿ ನೀಡುತ್ತಿದ್ದೇವೆ. ಈ ಅಧಿವೇಶನದಲ್ಲಿ ವರದಿ ಜಾರಿಯಾಗದೇ ಇದ್ದರೆ ಶಾಸಕರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಡಿಎಸ್‍ಎಸ್ ಮುಖಂಡ ಮಲೆಮಾಚಿಕೆರೆ ಸತೀಶ್ ಎಚ್ಚರಿಸಿದರು.

ಮೊನ್ನೆಯಷ್ಟೇ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ ದಲಿತ ಮುಖಂಡ ಸಭೆ ನಡೆಯಿತು. ಕೆಲವರು ಸರಕಾರದ ವಿರುದ್ಧ ಅವರು ಮಾತನಾಡಿದ್ದಾರೆ ಎಂದು ಆರೋಪಿ ರಾಜೀನಾಮೆ ಕೇಳುತ್ತಿದ್ದಾರೆ. ಸಮುದಾಯ ಪರವಾಗಿ, ಮೀಸಲಾತಿ ಪರವಾಗಿ ಅವರು ಮಾತನಾಡಿದ್ದಾರೆ. ಮುನಿಯಪ್ಪ ರಾಜೀನಾಮೆ ಕೇಳುವುದು ಅಪ್ರಸ್ತುತ ಎಂದು ದಲಿತ ಮುಖಂಡರು ಸಚಿವ ಮುನಿಯಪ್ಪ ಪರ ಧ್ವನಿಗೂಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಹಟ್ಟಿತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಬಿ.ಮಹೇಶ್ವರಪ್ಪ, ಗ್ಯಾಸ್ ಓಬಣ್ಣ, ರೇಣುಕೇಶ್ ಸೇರಿದಂತೆ ಅನೇಕರು ಇದ್ದರು.

Share this Article
Leave a comment

Leave a Reply

Your email address will not be published. Required fields are marked *

error: Content is protected !!