ಸುದ್ದಿವಿಜಯ, ಜಗಳೂರು: ಪಟ್ಟಣದ NGO ಬಡಾವಣೆಯಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸೇರಿದ ಸಾಂಸ್ಕೃತಿಕ ಭವನದಲ್ಲಿ ಅಕ್ರಮವಾಗಿ ಸಿಮೆಂಟ್ ಮತ್ತಿತರ ಉಪಕರಣಗಳನ್ನು ಶೇಕರಿಸಿದ್ದ ಬಗ್ಗೆ ‘ಗುತ್ತಿಗಾದರನ ಗೋದಾಮಾದ ಸಾಂಸ್ಕೃತಿಕ ಭವನ’ ಸುದ್ದಿ ಸುದ್ದಿವಿಜಯದಲ್ಲಿ ಪ್ರಕಟವಾಗಿತ್ತು.
ಶುಕ್ರವಾರ ಬೆಳಿಗ್ಗೆ ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣವೇ ಖಾಲಿ ಮಾಡಲು ಗುತ್ತಿಗೆದಾರನಿಗೆ ಸೂಚನೆ ನೀಡಿದ್ದ ಹಿನ್ನೆಲೆ ಶನಿವಾರ ಸಿಮೆಂಟ್ ಚೀಲಗಳನ್ನು ಬೇರೆಡೆ ಸಾಗಿಸಲಾಯಿತು.
ಕನ್ನಡ ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇದಿಕೆಯಾಗಬೇಕಿದ್ದ ಜಾಗದಲ್ಲಿ ಕಾಂಟ್ರ್ಯಾಕ್ಟರ್ ಜಿಲಾನಿ ಅವರು ಸುಮಾರು 800 ಚೀಲ ಸಿಮೆಂಟ್, ಕಟ್ಟಡ ಕಟ್ಟಲು ಬೇಕಾಗುವ ಸೆಂಟ್ರಿಂಗ್ ಉಪಕರಣಗಳನ್ನು ಹಾಕಿ ಸರಕಾರಿ ಕಟ್ಟಡವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದರು.
ಸುದ್ದಿವಿಜಯದಲ್ಲಿ (suddivijaya.com) ಪ್ರಕಟವಾಗುತ್ತಿದ್ದಂತೆ ಟಂಟಂ ಆಟೋದಲ್ಲಿ ಸಿಮೆಂಟ್ ಚೀಲಗಳನ್ನು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಆದರೆ ಸುಮಾರು 6 ವರ್ಷಗಳ ಕಾಲ ಸರಕಾರಿ ಕಟ್ಟಡದಲ್ಲಿ ಬಾಡಿಗೆ ಪಾವತಿಸದೇ ಸ್ವಂತಕ್ಕೆ ಗೋದಾಮಾಗಿ ಪರಿವರ್ತಿಸಿದ್ದು ಸರಕಾರಕ್ಕೆ ಗುತ್ತಿಗೆದಾರ ಜಿಲಾನಿ ನಷ್ಟ ಮಾಡಿದ್ದಾರೆ.
ಸರಕಾರಕ್ಕೆ ಬಾಡಿಗೆ ಕಟ್ಟಬೇಕಾದ ಗುತ್ತಿಗೆದಾರ ನುಣಿಚಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಅಧಿಕಾರಿಗಳು ತಕ್ಷಣವೇ ಅವರಿಂದ ಬಾಡಿಗೆ ಹಣವನ್ನು ವಸೂಲಿ ಮಾಡಬೇಕು.
ಹಾಗೂ ಬೃಹತ್ ವಾಹನಗಳ ಓಡಾಟದಿಂದ 2022ನೇ ಸಾಲಿನಲ್ಲಿ ನಿರ್ಮಿಸಿದ್ದ ₹5 ಲಕ್ಷ ರೂ ವೆಚ್ಚದ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿದ್ದು ಪಪಂ ಎಂಜಿನಿಯರ್ ಶ್ರುತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು.
ರಸ್ತೆ ದುರಸ್ತಿ ಕಾರ್ಯದ ಜೊತೆಗೆ ಭವನಕ್ಕೆ ಸುಣ್ಣ, ಬಣ್ಣ ಮೂಲ ಸೌಕರ್ಯಗಳನ್ನು ಗುತ್ತಿಗೆದಾರರನಿಂದಲೇ ಮಾಡಿಕೊಡಬೇಕು ಇಲ್ಲವಾದರೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಹೋರಾಟಗಾರ ಮಹಾಲಿಂಗಪ್ಪ ಒತ್ತಾಯಿಸಿದ್ದಾರೆ.