suddivijayanews01/07/2024
ಸುದ್ದಿವಿಜಯ, ಜಗಳೂರು: ಸಿರಿಧಾನ್ಯ ನವಣೆ ಬೆಳೆಯಲ್ಲಿ ಅಧಿಕ ಇಳುವರಿ ಕೊಡುವ ಹಾಗೂ ಬರನಿರೋಧಕ ತಳಿಯಾದ ಎಚ್ಎನ್-46 ತಡ ಮುಂಗಾರಿಗೆ ಸೂಕ್ತವಾದ ಬಿತ್ತನೆ ಬೀಜವಾಗಿದೆ ಎಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ.ಬಿ.ಒ.ಮಲ್ಲಿಕಾರ್ಜುನ ರೈತರಿಗೆ ಮಾಹಿತಿ ನೀಡಿದರು.
ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಸೋಮವಾರ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಬಿದರಕೆರೆ ಎಫ್ಪಿಒ ಆಶ್ರಯದಲ್ಲಿ ನವಣೆ ಮುಂಚೂನೆಯ ಪ್ರಾತ್ಯಕ್ಷಿಕೆಯ ಅಂಗವಾಗಿ ಆಯ್ದ 10 ಪ್ರಗತಿಪರ ರೈತರಿಗೆ ಉಚಿತವಾಗಿ ನವಣೆ ಬೀಜ ಮತ್ತು ಜೈವಿಕ ಗೊಬ್ಬರಗಳನ್ನು ವಿತರಿಸಿ ಮಾತನಾಡಿದ ಅವರು,
ವೈವಿಧ್ಯಮ ಬೆಳೆಗಳಿಗೆ ಪೂರಕವಾದ ವಾತಾವಣವಿರುವ ಜಗಳೂರು ತಾಲೂಕಿನಲ್ಲಿ ಸಿರಿಧಾನ್ಯ ಬೆಳೆಗೆ ಪೂರಕವಾದ ಮಣ್ಣು ಇದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳ ಬೆಳೆಯ ವಿಸ್ತರಣೆ ಕಡಿಮೆಯಾಗುತ್ತಿರುವುದಕ್ಕೆ ಕಾರಣ ಕಡಿಮೆ ಇಳುವರಿ. ನವಣೆ ಪ್ರಮುಖವಾದ ಒಂದು ಸಿರಿಧಾನ್ಯ ಬೆಳೆ.

ನವಣೆ ಬೆಳೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ನವೀನ ತಳಿಯಾದ ಎಚ್ಎನ್46, ಪ್ರತಿ ಎಕರೆಗೆ ನಾಲ್ಕು ಕೆಜಿ ಬೀಜ ಬೇಕಾಗುತ್ತದೆ ಹಾಗೂ ಜೈವಿಕ ಗೊಬ್ಬರಗಳಾದ ಅಜೋಸ್ಪಿರಿಲಂ ಮತ್ತು ರಂಜಕ ಕರಗಿಸುವ ಬ್ಯಾಕ್ಟೀರಿಯ 200 ಗ್ರಾಂ ಪ್ರತಿ ಎಕರೆ ಬೀಜಕ್ಕೆ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮಣ್ಣು ವಿಜ್ಞಾನಿಗಳಾದ ಎಚ್.ಎಂ. ಸಣ್ಣಗೌಡರವರು ಮಾತನಾಡಿ, ಜೈವಿಕ ಗೊಬ್ಬರದ ಬಳಕೆಯಿಂದ ರಾಸಾಯನಿಕ ಗೊಬ್ಬರದ ಅವಲಂಬನೆಯನ್ನು ಕಡಿಮೆ ಮಾಡಬಹುದು ಎಂದರು.
ತರಬೇತಿ ಕಾರ್ಯಕ್ರಮದಲ್ಲಿ ಸಸ್ಯ ಸಂರಕ್ಷಣಾ ತಜ್ಞ ಡಾ.ಟಿ.ಜಿ.ಅವಿನಾಶ್, ಬಿದರಕೆರೆ ರೈತ ಉತ್ಪಾದಕ ಕಂಪನಿಯ ನಿರ್ದೇಶಕ ಕಿಲಾರಿ ಕೃಷ್ಣಮೂರ್ತಿ, ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.