ಸುದ್ದಿವಿಜಯ, ಜಗಳೂರು: ಘನತ್ಯಾಜ್ಯ ನಿರ್ವಹಣೆ ದೇಶದ ಪ್ರಮುಖ ಸಮಸ್ಯೆಯಾಗಿದೆ. ಅದನ್ನು ನಿಯಂತ್ರಿಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಹೇಳಿದರು.
ಇಲ್ಲಿನ ಬಿದರಕೆರೆ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ, ಸರ್ಕಾರಿ ಪದವಿಪೂರ್ವ ಕಾಲೇಜು, ತಾಲೂಕು ಆರೋಗ್ಯಾಧಿಕಾರಿಗಳ ಇಲಾಖೆ ಇವರ ಸಹಯೋಗದಲ್ಲಿ ಸ್ವಚ್ಛತೆಯೇ ಸೇವೆ ಕಾರ್ಯಕ್ರಮದಡಿ ಸ್ವಚ್ಛತಾ ಕಾರ್ಯಕ್ರಮ ಮತ್ತು ತ್ಯಾಜ್ಯ ವಿಂಗಡಣೆ ಹಾಗೂ ತ್ಯಾಜ್ಯ ಸಂಸ್ಕರಣೆ ಅಭಿಯಾನದಲ್ಲಿ ಮಾತನಾಡಿದರು.
ಜನರು ಸಾಮಾನ್ಯವಾಗಿ ವಸತಿ ಮತ್ತು ವಾಣಿಜ್ಯ ಪ್ರದೇಶಗಳಲ್ಲಿ ಬೇರ್ಪಡಿಸಿದ ತ್ಯಾಜ್ಯಕ್ಕೆ ಡಸ್ಟ್ ಬಿನ್ ಗಳನ್ನು ಒದಗಿಸಿದರೂ ಅದನ್ನು ಉಪಯೋಗಿಸದೇ ಇರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ. ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅಧಿಕಾರಿಗಳು ಎಷ್ಟೆ ಅಭಿಯಾನ ನಡೆಸಿದರು ಜನರ ಸಹಕಾರವಿಲ್ಲದೇ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
![ಜಗಳೂರು ಪಟ್ಟಣದ ಬಿದರಕೆರೆ ರಸ್ತೆಯಲ್ಲಿ ಪಟ್ಟಣ ಪಂಚಾಯಿತಿ, ಸರಕಾರಿ ಪದವಿಪೂರ್ವ ಕಾಲೇಜು, ತಾಲೂಕು ಆರೋಗ್ಯಾಧಿಕಾರಿಗಳ ಇಲಾಖೆ ಇವರ ಸಹಯೋಗದಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ತ್ಯಾಜ್ಯ ಸಂಸ್ಕರಣೆ ಅಭಿಯಾನ ನಡೆಯಿತು.](http://suddivijaya.com/wp-content/uploads/2023/09/27JLR2A.jpg)
ಪಟ್ಟಣದಲ್ಲಿ ಬಹುತೇಕ ಬಡಾವಣೆಯಲ್ಲಿ ನಿವೇಶನ ಹೊಂದಿರುವ ಮಾಲೀಕರು ಸೈಟ್ಗಳನ್ನು ಸ್ವಚ್ಛತೆ ಮಾಡದೆ ಗಿಡ ಗಂಟೆಗಳನ್ನು ಬೆಳೆಸಿ ಹಂದಿ, ನಾಯಿಗಳು ವಾಸ ಮಾಡುವಂತೆ ಮಾಡಿದ್ದಾರೆ. ಇದರಿಂದ ಸುತ್ತಮುತ್ತಲು ವಾಸಮಾಡುವ ಜನರಿಗೆ ತೊಂದರೆಯುಂಟಾಗುತ್ತದೆ. ಆದ್ದರಿಂದ ಆದಷ್ಟು ಬೇಗ ಸ್ವಚ್ಛತೆಗೊಳಿಸಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಬಿದರಕೆರೆ ರಸ್ತೆಯ ಪಕ್ಕದಲ್ಲಿ ಬೆಳೆದು ನಿಂತಿದ್ದ ಗಿಡಗಂಟೆಗಳನ್ನು ಸ್ವಚ್ಛತೆಗೊಳಿಸದರು.
ಈ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಜೇಶ್ವರಿ, ಪ.ಪಂ ಆರೋಗ್ಯ ನಿರೀಕ್ಷಕ ಕಿಫಾಯಿತ್, ಎನ್ಎಸ್ಎಸ್ ಅಧಿಕಾರಿ ಎನ್. ಪ್ರಸಾದ್, ಸೇರಿದಂತೆ ಮತ್ತಿತರಿದ್ದರು.