ಸುದ್ದಿವಿಜಯ, ಜಗಳೂರು: ಜಿಎಂ ವಿವಿಯ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ರಾಜ್ಯದ ಪ್ರತಿಷ್ಠಿತ 52 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, ಅತ್ಯಂತ ಹಿಂದುಳಿದ ಜಗಳೂರು ತಾಲೂಕಿನ ಯುವ ಸಮುದಾಯಕ್ಕೆ ಸೂಕ್ತ ಭದ್ರತೆಯ ಉದ್ಯೋಗಾವಕಾಶಗಳನ್ನು ದೊರೆಕಿಸಿಕೊಡುತ್ತಿದೆ ಎಂದು ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿದರು.
ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಜಿ.ಮಲ್ಲಿಕಾರ್ಜುನಪ್ಪ, ಹಾಲಮ್ಮ ಚಾರಿಟಿ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲೇ ಒಬ್ಬ ಕೂಲಿ ಕಾರ್ಮಿಕನಿಗೆ 500 ರೂ ಇರುವಾಗ ಕಡಿಮೆ ಸಂಬಳಕ್ಕೆ ಯಾವ ಯುವಕರೂ ಕೆಲಸಕ್ಕೆ ಬರುವುದಿಲ್ಲ. ಉತ್ತಮ ಸಂಬಳ, ಸಾರಿಗೆ, ತಂಗುವ ವ್ಯವಸ್ಥೆ ಕೊಡುವ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಲಿದ್ದು, ಬಂದಿರುವ 52 ಕಂಪನಿಗಳು ಉತ್ತಮ ವೇತನ ನೀಡಬೇಕು.
ಕೇಂದ್ರ ಸರಕಾರದಿಂದ ಯುವಕರಿಗೆ ಮೇಕಿನ್ ಇಂಡಿಯಾ, ಸೇರಿದಂತೆ ವಿವಿಧ ಯೋಜನೆಗಳಿಂದ ಸ್ವಯಂಕ್ಕೆ ಹೆಚ್ಚು ಉತ್ತೇಜನ ನೀಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಉದ್ಯೋಗ ಮೇಳ ಆಯೋಜನೆಯಿಂದ ಯುವಕರಿಗೆ ಹೆಚ್ಚು ಉದ್ಯೋಗ ಭದ್ರತೆ ಸಿಗುತ್ತದೆ ಎಂದರು.
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಜಗಳೂರು ಕ್ಷೇತ್ರವನ್ನು ನೀರಾವರಿ ಮಾಡುವ ಸಂಕಲ್ಪ ಮಾಡಿದ್ದೆ. ಜಗಳೂರು ಕ್ಷೇತ್ರದ ಅಭಿವೃದ್ಧಿಗೆ 57 ಕೆರೆ ತುಂಬಿಸುವ ಯೋಜನೆ, ಅಪ್ಪರ್ ಭದ್ರಾ ಯೋಜನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೂರಾರು ಕೋಟಿ ರೂ ಅನುದಾನ ತಂದು ಅಭಿವೃದ್ಧಿ ಮಾಡಲಾಗಿತ್ತು.
ಈಗ ನಾನು ಸೋತರು ಸಹ ಜಗಳೂರು ತಾಲ್ಲೂಕಿನ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಸಂಸದರು, ಹಾಗು ಅವರ ಪುತ್ರರನ್ನು ಜಗಳೂರಿನಲ್ಲೇ ಉದ್ಯೋಗ ಮೇಳ ಆಯೋಜನೆ ಮಾಡಿ ಯುವಕರಿಗೆ ಉದ್ಯೋಗ ನೀಡುವಂತೆ ಮನವಿಗೆ ಸ್ಪಂಧಿಸಿ ಉದ್ಯೋಗ ಮೇಳ ಆಯೋಜನೆ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.ಜಗಳೂರು ಪಟ್ಟಣದ ನಾಲಂದ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸದ ಜಿಎಂ ಸಿದ್ದೇಶ್ವರ್ ಕಂಪನಿಯಿಂದ ಆಫರ್ ಲೆಟರ್ ವಿತರಿಸಿದರು.
ಜಿ.ಎಸ್.ಅನಿತ್ ಕುಮಾರ್ ಮಾತನಾಡಿ, ಹೆಚ್ಚು ಮಾನವ ಸಂಪನ್ಮೂಲ ಹೊಂದಿರುವ ಜಗಳೂರು ತಾಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿಯಲು ಕಾರಣ ಇಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲ. ಯುವಕರು ಉದ್ಯೋಗ ಹುಡಕಿಕೊಂಡು ಹೋಗುವ ಬದಲು ಇಲ್ಲಿಯೇ ಉದ್ಯೋಗ ಮೇಳ ಆಯೋಜನೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
ಚಾರಿಟಿ ಫೌಂಡೇಶನ್ನ ಸಂಯೋಜಕರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಚಾರಿಟಿ ಫೌಂಡೇಶನ್ ನಡೆದು ಬಂದ ಹಾದಿ ಮತ್ತು ಮುಂದಿನ ದಿನಗಳಲ್ಲಿ ಹಮ್ಮಿಕೊಂಡಿರುವ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು.
ಉದ್ಯೋಗ ಮೇಳದಲ್ಲಿ ಒಟ್ಟು 52 ವಿವಿಧ ಕಂಪನಿಗಳು ಭಾಗವಹಿಸಿದ್ದವು.ಮೇಳದಲ್ಲಿ 1200 ಕ್ಕೂ ಅಧಿಕ ಉದ್ಯೋಗ ಆಕಾಂಕ್ಷಿಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಸಂದರ್ಶನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದ ಸಂದರ್ಶನ ಪ್ರಕ್ರಿಯೆಯು ಸಂಜೆ 4:00 ವರೆಗೆ ಬಹಳ ಯಶಸ್ವಿಯಾಗಿ ಮತ್ತು ಶಿಸ್ತಿನಿಂದ ಕೂಡಿತ್ತು. ಅಂತಿಮವಾಗಿ 560 ಉದ್ಯೋಗ ಆಕಾಂಕ್ಷಿಗಳು ಸಂದರ್ಶನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಂಪನಿಗಳಿಗೆ ಆಯ್ಕೆಯಾದರು ಎಂದು ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ್ ಅಧ್ಯಕ್ಷ ಎಚ್.ಸಿ.ಮಹೇಶ್, ಮಾಜಿ ಜಿ.ಪಂ.ಸದಸ್ಯ ಕೆ.ಮಂಜುನಾಥ್, ಸೊಕ್ಕೆ ನಾಗರಾಜ್, ಬಿಜೆಪಿ ಮುಖಂಡರಾದ ಲಿಂಗಣ್ಣನಹಳ್ಳಿ ಕೃಷ್ಣಮೂರ್ತಿ, ಪ್ರಾಂಶುಪಾಲ ಸಿ.ತಿಪ್ಪೇಸ್ವಾಮಿ, ಪಪಂ ಸದಸ್ಯರಾದ ಆರ್.ತಿಪ್ಪೇಸ್ವಾಮಿ, ದೇವರಾಜ್, ನಿರ್ಮಲಾ ಕುಮಾರಿ, ಪಾಪಲಿಂಗಪ್ಪ, ಜಿಎಂ ವಿವಿಯ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಸೇರಿದಂತೆ ಅನೇಕರು ಇದ್ದರು.