ಸುದ್ದಿವಿಜಯ, ಜಗಳೂರು: ಲೋಕಸಭಾ ಚುನಾವಣೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು ಕಾರ್ಯಕರ್ತರು ಒಮ್ಮತದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಿದ್ಧರಾಗಬೇಕು ಎಂದು ಸೂಚ್ಯವಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನ ಡಾ.ಪ್ರಭಾ ಮಲ್ಲಿಕಾರ್ಜುನ್ (Dr Prabha Mallikarjun SS) ಕಾರ್ಯಕರ್ತರಿಗೆ ಕರೆ ನೀಡಿದರು.
ಶುಕ್ರವಾರ ವರಮಹಾಲಕ್ಷ್ಮಿ (varalakshmi pooja) ಹಬ್ಬದ ಹಿನ್ನೆಲೆ ಶಾಸಕ ಬಿ.ದೇವೇಂದ್ರಪ್ಪ ಅವರ ನಿವಾಸಲ್ಲಿ ಮಹಿಳೆಯರಿಗೆ ಬಾಗೀನ ಕೊಡುವ ಶಾಸ್ತ್ರದಲ್ಲಿ ಭಾಗವಹಿಸಿ ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ತಾವೆಲ್ಲರೂ ಶ್ರಮಿಸಬೇಕು.
ನನಗೆ ಜಗಳೂರು ಕ್ಷೇತ್ರ ಹೊಸದಲ್ಲ. ಮಲ್ಲಿಕಾರ್ಜುನ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ಅನೇಕ ಬಾರಿ ಪ್ರಚಾರಕ್ಕೆ ಬಂದಿದ್ದೇನೆ. ಇಲ್ಲಿನ ಎಲ್ಲ ನಾಯಕರ ಮುಖ ಪರಿಚಯವಿದೆ. ಈ ಬಾರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಪ್ರತಿಯೊಬ್ಬ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಕರೆ ನೀಡಿದರು.
ಶಾಸಕ ದೇವೇಂದ್ರಪ್ಪ ಅವರು ಪ್ರಸ್ತುತ ವರ್ಷ ವರಮಹಾಲಕ್ಷ್ಮಿ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಸಾವಿರಾರು ಮಹಿಳೆಯರಿಗೆ ಬಾಗೀನ ಕೊಡುವ ಮೂಲಕ ಎಲ್ಲರನ್ನೂ ತಮ್ಮ ಮನೆಗೆ ಕರೆಸಿ ಸಹೋದರಿಯಂತೆ ಕಾಣುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಎಲ್ಲರನ್ನೂ ತಮ್ಮ ಮನೆಯ ಮಕ್ಕಳಂತೆ ಕಾಣುತ್ತಿರುವುದು ಸಂತೋಷದ ವಿಷಯ ಎಂದು ಕೊಂಡಾಡಿದರು.
ಶಾಸಕ ಚಿಕ್ಕಮ್ಮನಹಳ್ಳಿ ಬಿ.ದೇವೇಂದ್ರಪ್ಪ ಮಾತನಾಡಿ, ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕ ಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಎಲ್ಲ ಕಾರ್ಯಕರ್ತರು, ಮುಖಂಡರ ಅಭಿಪ್ರಾಯವಾಗಿದೆ. ಒಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾರೆ ಎನ್ನುವುದಕ್ಕೆ ಪ್ರಭಾ ಮಲ್ಲಿಕಾರ್ಜುನ್ ಅವರೇ ಉದಾಹರಣೆ. ಸಮಾಜ ಸೇವೆಯಿಂದ ಇಡೀ ಕ್ಷೇತ್ರದಲ್ಲಿ ಅವರು ಮನೆ ಮಾತಾಗಿದ್ದಾರೆ.
ಈ ದೇಶದಲ್ಲಿ ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಗೆಲ್ಲಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕು ಹೆಚ್ಚು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಿಸುವ ಕನಸು ಹೊಂದಿದ್ದಾರೆ.
ದಾವಣಗೆರೆ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಕಂಕಣ ತೊಡಬೇಕು. ವಿಧಾನಸಭೆ ಚುನಾವಣೆ ಲೋಕಸಭಾ ಚುನಾವಣೆಗೆ ಮೈಲಿಗಲ್ಲಾಗಿದೆ. ನಂಜುಂಡಪ್ಪ ವರದಿ ಅನುಸಾರ ನಮ್ಮ ಕ್ಷೇತ್ರ ಅತ್ಯಂತ ಹಿಂದುಳಿದಿದೆ.
ಈ ಬಾರಿ ಮಳೆ ಕೈಕೊಟ್ಟಿದ್ದು ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು ಎಂದು ಪ್ರಭಾ ಮಲ್ಲಿಕಾರ್ಜುನ್ ಮೂಲಕ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಂಬತ್ತಳ್ಳಿ ಮಂಜುನಾಥ್, ಶಂಷೀರ್ ಅಹಮದ್, ಪಲ್ಲಾಗಟ್ಟೆ ಶೇಖರಪ್ಪ, ಸಿ.ತಿಪ್ಪೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಮಹೇಶ್ವರಪ್ಪ,
ವಾಲೀಬಾಲ್ ತಿಮ್ಮಾರೆಡ್ಡಿ, ಪಪಂ ಸದಸ್ಯ ರಮೇಶ್ರೆಡ್ಡಿ, ಅರಿಶಿಣಗುಂಡಿ ಮಂಜುನಾಥ್, ಸುರೇಶ್ಗೌಡ್ರು, ಷಕೀಲ್ ಅಹಮದ್, ರವಿಕುಮಾರ್, ಸಣ್ಣಸೂರಯ್ಯ, ಶಂಭುಲಿಂಗಪ್ಪ ಎಸ್ಸಿ, ಎಸ್ಟಿ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.