ಜನಸ್ನೇಹಿ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಸೇವೆಯಿಂದ ಬಿಡುಗಡೆಗೆ ಜಗಳೂರು ಜನತೆ ಬೇಸರ

Suddivijaya
Suddivijaya August 2, 2023
Updated 2023/08/02 at 7:37 PM

ಸುದ್ದಿವಿಜಯ, ಜಗಳೂರು: ಕಳೆದ ಒಂದೂವರೆ ವರ್ಷಗಳಿಂದ ಜಗಳೂರು ತಾಲೂಕಿನಲ್ಲಿ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಗೆ (transfer)ವರ್ಗಾವಣೆಯಾಗಿದ್ದರಿಂದ ಬುಧವಾರ ಮಧ್ಯಾಹ್ನ ತಮ್ಮ ಸೇವೆಯಿಂದ ಬಿಡುಗಡೆ ಹೊಂದಿದ್ದಾರೆ.

2021 ಡಿಸೆಂಬರ್ ನಲ್ಲಿ ಜಗಳೂರು ತಹಶೀಲ್ದಾರ್ ಆಗಿ ಸೇವೆ ಆರಂಭಿಸಿದ್ದ ಅವರ ಕಾರ್ಯವೈಖರಿಯನ್ನು ಜನಸಾಮಾನ್ಯರು ಸೇರಿ ಎಲ್ಲ ಇಲಾಖೆಯ ಅಧಿಕಾರಿಗಳು ಮೆಚ್ಚಿ ಸೈ ಎನ್ನಿಸಿಕೊಂಡಿದ್ದರು.

ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಅವರು ಇಡಿ ತಾಲೂಕಿನಲ್ಲಿ ಎಲ್ಲಿಯೂ ಒಂದೇ ಒಂದು ಕಹಿ ಘಟನೆಗೆ ಅವಕಾಶ ಕೊಡದಂತೆ ನೋಡಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಬಡವರು, ರೈತರು, ವಿದ್ಯಾರ್ಥಿಗಳು, ವಯೋವೃದ್ಧರು ಎಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಸಂಧ್ಯಾಸುರಕ್ಷ, ವಿದವಾ ವೇತನ, ಅಂಗವಿಕಲರ ಮಾಸಾಶನಕ್ಕೆ ಅರ್ಜಿ ಹಾಕಿ ಸಮಸ್ಯೆ ಆದವರಿಗೆ ಸ್ಥಾಳದಲ್ಲೇ ಪರಿಹಾರ ಕೊಡಿಸುತ್ತಿದ್ದರು.

ಕಂದಾಯ, ಭೂವ್ಯಾಜ್ಯ, ಪಹಣಿ ಸಮಸ್ಯೆ ಎಂದು ಕಚೇರಿಗೆ ಬಂದ ಜನ ಸಾಮಾನ್ಯರನ್ನು ಕಚೇರಿಯಲ್ಲೇ ಕುಳ್ಳಿರಿಸಿ ಮಾತನಾಡಿಸಿ ಸಂಬಂಧ ಪಟ್ಟ ಅಧಿಕಾರಿಯನ್ನು ಕರೆಸಿ ಕ್ಷಣಾರ್ಧದಲ್ಲೇ ಸಮಸ್ಯೆಗೆ ಪರಿಹಾರ ಒದಗಿಸುತ್ತಿದ್ದ ಅತ್ಯಂತ ಮಿತಭಾಷಿ. ದಕ್ಷ ತಹಶೀಲ್ದಾರ್ ಎಂದೇ ಫೇಮಸ್ ಆಗಿದ್ದವರು.

“ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಇಡಿ ತಾಲೂಕಿನ ಕಟ್ಟ ಕಡೆಯ ಹಳ್ಳಿಗಳನ್ನು ಗುರುತಿಸಿ ಆ ಹಳ್ಳಿಗೆ ಬೇಕಾಗಿದ್ದ ಮೂಲಸೌಕರ್ಯಗಳನ್ನು ಗುರುತಿಸಿ ಜನರ ಕಷ್ಟಗಳಿಗೆ ಸ್ಪಂದಿಸುವ ತಹಶೀಲ್ದಾರ್ ಎಂದರೆ ಅದು ಜಿ.ಸಂತೋಷ್‍ಕುಮಾರ್ ಅವರು.

ಆಡಳಿತ ಸುಧಾರಣೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಪ್ರವಾಹ, ಸಿಡಿಲು ಬಡಿದು ಸಾವನ್ನಪ್ಪಿದ ಜನ ಜಾನುವಾರುಗಳಿಗೆ ಸರಕಾರದ ಪರಿಹಾರ ನಿಧಿಯನ್ನು ತಕ್ಷಣವೇ ಒದಗಿಸುತ್ತಿದ್ದರು.

ತಹಶೀಲ್ದಾರ್ ಕಚೇರಿ ನವೀಕರಣ ಕಾರ್ಯದಲ್ಲಿ ಗುಣಮಟ್ಟಕ್ಕೆ ಹೆಚ್ಚು ಒತ್ತು ನೀಡಿದ ಅಧಿಕಾರಿ. ಅವರ ಆಡಳಿತ ಅವಧಿಯಲ್ಲಿ ತಾಲೂಕಿನಲ್ಲಿ ಎಲ್ಲಿಯೂ ಒಂದೇ ಒಂದು ಕಹಿ ಘಟನೆಗೆ ಅವಕಾಶ ನೀಡಲಿಲ್ಲ. ರಾಷ್ಟೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾಗಿದ್ದ ಅವರು, ಎಲ್ಲ ಮಹಾನ್ ನಾಯಕರ ಜನ್ಮದಿಚಾಚರಣೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು.

ಅವರು ವರ್ಗಾವಣೆಯಾಗಿದ್ದು ಸತಃ ಶಾಸಕರಾದ (MlA) ಬಿ.ದೇವೇಂದ್ರಪ್ಪ ಅವರಿಗೆ ಇಷ್ಟವಿರಲಿಲ್ಲ. ಜಿ.ಸಂತೋಷ್‍ಕುಮಾರ್ ವರ್ಗಾವಣೆಯಿಂದ ತಾಲ್ಲೂಕು ಮಟ್ಟದ ಅಧಿಕಾರಿಗಳು, ಜನಸಾಮಾನ್ಯರಿಗೆ ಬೇಸರ ಉಂಟಾಗಿದೆ ಎಂದು ಇತ್ತೀಚಿಗೆ ನಿವೃತ್ತರಾದ ಸಮಾಜ ಕಲ್ಯಾಣಾಧಿಕಾರಿ ಬಿ.ಮಹೇಶ್ವರಪ್ಪ, ಮುಖಂಡರಾದ ನಜೀರ್ ಅಹಮದ್, ಕಾನನಕಟ್ಟೆ ಪ್ರಭು ಸೇರಿದಂತೆ ಅನೇಕ ಜನ ಸಾಮಾನ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಜಿ.ಸಂತೋಷ್‍ಕುಮಾರ್ ಸೇವೆಯಿಂದ ಬಿಡುಗಡೆಯಾಗಿ ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಲು ತೆರಳಿದ್ದಾರೆ. ಗ್ರೇಡ್2 ತಹಶೀಲ್ದಾರ್ ಮಂಜಾನಂದ ಅವರು ಸದ್ಯ ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆದರೆ ಜಿ.ಸಂತೋಷ್‍ಕುಮಾರ್ ಅವರಂತಹ ಜನಸ್ನೇಹಿ ಅಧಿಕಾರಿಗಳು ಕಾಣ ಸಿಗುವುದು ಅಪರೂಪ. ಅವಕಾಶ ಸಿಕ್ಕರೆ ಮತ್ತೊಮ್ಮೆ ಜಗಳೂರು ತಹಶೀಲ್ದಾರರಾಗಿ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.

Share this Article
Leave a comment

Leave a Reply

Your email address will not be published. Required fields are marked *

error: Content is protected !!