ಸುದ್ದಿವಿಜಯ, ಜಗಳೂರು: ತಾಲೂಕಿನಲ್ಲಿ ಇನ್ನು ನಾಲ್ಕು ದಿನಗಳ ಕಾಲ ಸೋನೆ ಮಳೆ ಸುರಿಯಲಿದ್ದು ಮೆಕ್ಕೆಜೋಳ, ಶೇಂಗಾ, ಸೂರ್ಯಕಾಂತಿ, ಹತ್ತಿ ಬೆಳೆದಿರುವ ರೈತರು ಯಾವ ರೀತಿ ತಮ್ಮ ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ತಾಲೂಕು ಕೃಷಿ ಅಧಿಕಾರಿ ಮಿಥುನ್ ಕಿಮಾವತ್ ರೈತರಿಗೆ ಮಾಹಿತಿ ನೀಡಿದರು.
ಜಿಲ್ಲಾ ಕೃಷಿ ಇಲಾಖೆ ಮತ್ತು ತಾಲೂಕು ಕೃಷಿ ಇಲಾಖೆವತಿಯಿಂದ ಮಂಗಳವಾರ ಆಯೋಜಿಸಿದ್ದ 12,500 ರೈತರಿಗೆ ಏಕ ಕಾಲದಲ್ಲಿ ಗುಂಪು ಸಂಹವಾಹನ ಫೋನ್ ಕರೆಯ ಮೂಲಕ ರೈತರಿಗೆ ಕೃಷಿಗೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಂಡರು.
ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಹೊಲಗಳಲ್ಲಿ ನೀರು ನಿಲ್ಲದಂತೆ ರೈತರು ನೋಡಿಕೊಳ್ಳಬೇಕು. ಈಗಾಗಲೇ ತಾಲೂಕಿನಲ್ಲಿ 28 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಮಳೆ ನಿಂತ ಮೇಲೆ ಎಡೆಕುಂಟು ಮತ್ತು ಬುಡ್ಡ ಕುಂಡೆ ಹೊಡೆಯುವ ಮೂಲಕ ದಿಂಡು ಏರಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಯೂರಿಯಾ ಬಳಸಬಾರದು. ಎಕರೆಗೆ ಕೇವಲ 15 ಕೆಜಿಯಷ್ಟು ಮಾತ್ರ ಬಳಸಿ ಎಂದು ಸಲಹೆ ನೀಡಿದರು.
ಮೆಕ್ಕೆಜೋಳದಲ್ಲಿ ಬೆಳೆದ ಕಳೆ ನಾಶಕಕ್ಕೆ ಟೆಂಪೋಟ್ರಯಾನ್ ಅಥವಾ ಟಂಜರ್ ಔಷಧ ಬಳಸಿ. ಲದ್ದಿ ಹುಳುಗಳು ಬಾಧೆ ಶೀತಮಯ ವಾತಾವರಣಕ್ಕೆ ಸಧ್ಯ ನಿಯಂತ್ರಣದಲ್ಲಿವೆಯಾ ಎಂದು ಪರೀಕ್ಷಿಸಿ. ಶುಷ್ಕ ವಾತಾವರಣದಲ್ಲಿ ಲದ್ದಿ ಹುಳುಗಳು ಸುಳಿಯಲ್ಲಿ ಇರುವುದು ಕಡಿಮೆ. ಆದರೂ ಇಮಾಮ್ಯಾಕ್ಟಿನ್ ಬೆಂಜೆಮೈಟ್ ಔಷಧ ಜೊತೆ ಆಲ್-19 ಮಿಶ್ರಣ ಮಾಡಿ ಸಿಂಪಡಿಸಿದರೆ ಲದ್ದಿ ಹುಳುಗಳು ನಿಯಂತ್ರಣಕ್ಕೆ ಬರುತ್ತವೆ.
ಶೇಂಗಾ ಬಿತ್ತನೆ ಮಾಡಿದ ರೈತರು ಎಕರೆಗೆ ಎರಡು ಕ್ವಿಂಟಾಲ್ ಜಿಪ್ಸಂ ಹಾಕಿದರೆ ಕಾಯಿಕೊರಕ ಬಾಧೆ ಕಡಿಮೆಯಾಗುತ್ತದೆ. ಎಡೆಕುಂಟೆ ಹೊಡೆಯುವ ಕಳೆ ನಿಯಂತ್ರಣಕ್ಕೆ ತನ್ನಿ. ಹತ್ತಿಯಲ್ಲಿ ರಸ ಹೀರುವ ಕೀಟಗಳು ಬರುತ್ತವೆ. ಎಲೆಗಳು ಬೂದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ಸಮೃದ್ಧಿ ಮತ್ತು ಲಘು ಪೋಷಕಾಂಶಗಳು ನೇರವಾಗಿ ಕೊಡಬೇಕು ಎಂದು ಸಲಹೆ ನಿಡಿದರು.
ಬಿಳಿಚೋಡು ರೈತ ಸಂಪರ್ಕ ಅಧಿಕಾರಿ ಹರ್ಷಾ ಮಾತನಾಡಿ, ಇದೇ ಜುಲೈ 31ಕ್ಕೆ ಮೆಕ್ಕೆಜೋಳ, ಸೂರ್ಯಕಾಂತಿ, ತೊಗರಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ಕಡೆಯ ದಿನವಾಗಿದ್ದು ಹತ್ತಿರದ ರೈತ ಸಂಪರ್ಕ ಕಚೇರಿಗೆ ಹೋಗಿ ಬೆಳೆ ವಿಮೆ ಮಾಡಿಸಿ. ಪಿಎಂ ಕಿಸಾನ್ ಯೋಜನೆಗೆ ತಾಲೂಕಿನಲ್ಲಿ 7300 ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ. ತಕ್ಷಣವೇ ಇ-ಕೆವೈಸಿ ಮಾಡಿಸಿ ಆರ್ಥಿಕ ಲಾಭ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.