ಸುದ್ದಿವಿಜಯ, ಜಗಳೂರು: ಒಂದು ಕ್ಷೇತ್ರದ ಶಾಸಕರು ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಆಯ್ಕೆಯಾದ ಪ್ರತಿನಿಧಿ. ಅವರಿಗೆ ತನ್ನದೇ ಆದ ಘನತೆಯಿರುತ್ತದೆ. ವೋಟ್ ಮಾಡಿದ ಜನರ ಪ್ರತಿನಿಧಿಯನ್ನು ಕೆಳಗೆ ಕುಳ್ಳಿರಿಸುವುದು ಸರಿಯೇ ಎಂಬುದು ಅನೇಕ ಪ್ರಜ್ಞಾವಂತರ ಅಭಿಮತ!
ಯೆಸ್, ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಶ್ರೀ ಸದ್ಗುರು ಶಿವಯೋಗಿ ಮೂಲತತ್ವ ಶ್ರೀ ಹಾಲಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಜಗಳೂರು ಶಾಸಕರಾದ ಎಸ್.ವಿ.ರಾಮಚಂದ್ರ ಅವರನ್ನು ಸ್ವಾಮೀಜಿಗಳು ಕುಳಿತಿದ್ದ ವೇದಿಕೆ ಕೆಳಗೆ ಕುಳ್ಳಿರಿಸಿ ಅಪಮಾನ ಮಾಡಲಾಗಿದೆ ಎಂದು ಅನೇಕ ಎಸ್ವಿಆರ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಜನರ ಪ್ರತಿನಿಧಿ ಅವರು. ಅವರನ್ನು ಸ್ವಾಮೀಜಿಗಳ ಪಕ್ಕದಲ್ಲೇ ಕುಳ್ಳಿರಸಬೇಕಿತ್ತು. ಅದು ಬಿಟ್ಟು ವೇದಿಕೆ ಕೆಳಗೆ ಕುಳಿತುಕೊಳ್ಳಲು ಖುರ್ಚಿ ಹಾಕಿರುವುದು ಸರಿಯೇ ಎಂದು ಅನೇಕರು ಪ್ರಶ್ನೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.
ಧರ್ಮ, ಜಾತಿಗಿಂತ ಸಂವಿಧಾನ ದೊಡ್ಡದು. ಜನ ಪ್ರತಿನಿಧಿ ಎಂದರೆ ಸಂವಿಧಾನ ಬದ್ಧವಾಗಿ ಆಯ್ಕೆಯಾಗಿರುತ್ತಾರೆ. ಶಾಸಕಾಂಗ ಎಂದರೆ ಕಾನೂನು, ಕಾಯ್ದೆಗಳನ್ನು ರಚಿಸುವ ಹಕ್ಕು ಹೊಂದಿರುತ್ತಾರೆ ಹೀಗಾಗಿ ಸಮಸ್ತ ಪ್ರಜೆಗಳು ಅವರನ್ನು ವೋಟ್ ಮಾಡಿ ನಮ್ಮ ಶಾಸಕರು ಎಂದು ಆಯ್ಕೆ ಮಾಡುತ್ತಾರೆ. ಅಂತಹ ಜನಪ್ರತಿನಿಧಿಯನ್ನು ವೇದಿಕೆ ಕೆಳಗೆ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿರುವುದು ಆಯೋಜಕ ಲೋಪವೆಂದು ಹೆಸರೇಳದ ಅನೇಕರು ಪ್ರಶ್ನೆ ಮಾಡಿದ್ದಾರೆ.
ಶಾಸಕರನ್ನು ಕೆಳಗೆ ಕುಳ್ಳಿರಿಸಿದ್ದು ತಾರತಮ್ಯದ ಸಂಕೇತ:
ಪ್ರಜಾಪ್ರಭುತ್ವ ಎಂದರೆ ಎಲ್ಲರೂ ಸಮಾನರು. ವೋಟ್ ಮೂಲಕ ಆಯ್ಕೆ ಮಾಡಿದ ಜನಪ್ರತಿಧಿಯನ್ನು ಕೆಳಗೆ ಕುಳ್ಳಿರಿಸಿದ್ದು ಬ್ರಾಹ್ಮಣ್ಯತ್ವದ ಸಂಕೇತವಾಗಿದೆ. ಅಂದರೆ ಈಗಿನ ವ್ಯವಸ್ಥೆಯಲ್ಲೂ ಶೋಷಣೆ ನಿರ್ಮೂಲನೆಯಾಗಿಲ್ಲ ಎಂದೇ ಬಿಂಬಿತವಾಗುತ್ತಿದೆ. ಪೀಠಾಧಿಪತಿಯಾಗಿರಲೀ ಯಾರೇ ಆಗಿರಲಿ ಸಂವಿಧಾನಕ್ಕಿಂತ ದೊಡ್ಡವರಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಾಣಬೇಕಿತ್ತು. ಕಾರ್ಯಕ್ರಮದ ಆಯೋಜಕರು ಇಂತಹ ಲೋಪವೆಸಗಿರುವುದು ಇಡೀ ವ್ಯವಸ್ಥೆಗೆ ಧಕ್ಕೆಯುಂಟುಮಾಡಿದೆ.
ಕೆ.ಎಸ್.ಪ್ರಭು, ಕಾನನಕಟ್ಟೆ ಬಿಜೆಪಿ ಮುಖಂಡರು.