ಸುದ್ದಿವಿಜಯ, ಜಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯಲ್ಲಿ ಮಹಾತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮಿ ಯೋಜನೆ ಇದೇ ಆ.30 ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮೈಸೂರಿನಲ್ಲಿ ಚಾಲನೆ ನೀಡಲಿದ್ದು ಫಲಾನುಭವಿಗಳ ಖಾತೆಗೆ 2000 ರೂಗಳನ್ನು ವರ್ಗಾವಣೆ ಮಾಡಲಿದ್ದಾರೆ.
ಅಂದು ಎಲ್ಲ ಗ್ರಾಪಂ ಮಟ್ಟದಲ್ಲಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಿ ಸಣ್ಣ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಎಚ್ಚರಿಕೆ ನೀಡಿದರು.
ಸೋಮವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲ್ಲೂಕಿನ 22 ಗ್ರಾಪಂ ಪಿಡಿಒ ಮತ್ತು ನೋಡಲ್ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನಮ್ಮ ಸರಕಾರದ ಐದು ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ ಒಂದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಯೋಜನೆ ಯಶಸ್ವಿಗೆ ಸಾಕಷ್ಟು ಶ್ರಮ ಮತ್ತು ಕನಸು ಇಟ್ಟುಕೊಂಡಿದ್ದಾರೆ.
ಕಾರ್ಯಕ್ರಮದ ಜಾರಿಗೆ ತಳಮಟ್ಟದಿಂದ ಕೆಲಸ ಮಾಡಿದ್ದಾರೆ. ಯೋಜನೆ ಯಶಸ್ವಿಯಾಗಬೇಕಾದರೆ ಪಿಡಿಒಗಳೇ ಕಾರಣೀಭೂತರು ಎಂದರು. ಗೃಹ ಲಕ್ಷ್ಮಿ ಯೋಜನೆಗಾಗಿ ಆನ್ಲೈನ್ ನಲ್ಲಿ ಅರ್ಜಿ ಹಾಕಿದವರು ಎಷ್ಟು, ಹಾಕದವರು ಎಷ್ಟು ಎಂದು ಪಟ್ಟಿಮಾಡಿ.
ಅರ್ಜಿ ಹಾಕದವರು ಯಾಕೆ ಹಾಕಿಲ್ಲ ಎಂದು ತಕ್ಷಣವೇ ಅವರ ನೆರವಿಗೆ ಪಿಡಿಒಗಳು ಮತ್ತು ನೋಡಲ್ ಅಧಿಕಾರಿಗಳು ದಾವಿಸಬೇಕು. ನಿಯೋಜನೆ ಮಾಡಿರುವ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಆ.30ರಂದು ಜಗಳೂರು ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ಮತ್ತು ಗುರುಭವನದಲ್ಲಿ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಸಾವಿರಾರು ಮಹಿಳೆಯರನ್ನು ಸೇರಿಸಿ ಎಲ್ಇಡಿ ಪರದೆ ಅಳವಡಿಸಿ ನೇರ ಪ್ರಸಾರ ವೀಕ್ಷಣೆ ಮಾಡಲು ಸಿದ್ಧತೆ ಮಾಡಿಕೊಳ್ಳಲು ಪಪಂ ಚೀಫ್ ಆಫೀಸರ್ ಮತ್ತು ತಾಲೂಕು ಆಡಳಿತಕ್ಕೆ ಸೂಚನೆ ನೀಡಿದ್ದೇನೆ.
ಅದರಂತೆ ಗ್ರಾಪಂ ಮಟ್ಟದಲ್ಲೂ ಎಲ್ಇಡಿ ಅಥವಾ ದೊಡ್ಡ ಟವಿಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಕಾರ್ಯಕ್ರಮದ ಉದ್ದೇಶವನ್ನು ಮನವಿರಿಕೆ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಉಪನಿರ್ದೇಶಕ ಸಿದ್ದರಾಮ ಬೂದಿಹಾಳ ಮಾತನಾಡಿ, ಸರಕಾರದ ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಪಿಡಿಒಗಳ ಪಾತ್ರ ದೊಡ್ಡದು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯಕ್ರಮ ಯಶಸ್ವಿಯಾಗಿ ಮಾಡಬೇಕು.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು ತಾಂತ್ರಿಕ ಸಮಸ್ಯೆಗಳು ಉಂಟಾದರೆ ನೋಡಲ್ ಮತ್ತು ಪಿಡಿಒಗಳು ಅವರ ನೆರವಿಗೆ ಬಂದು ಬ್ಯಾಂಕ್ ಮೇನೇಜರ್ ಬಳಿ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ನೀಡಿದರು.
ಗ್ರಾಪಂಗಳಿಗೆ ಒಳ ಪಡುವ ಗ್ರಾಮಗಳಿಂದ ಮಹಿಳೆಯರನ್ನು ಸೇರಿಸಿ ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಅರಿವು ಮೂಡಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಅದಕ್ಕಾಗಿಯೇ ಟೋಲ್ ಫ್ರೀ ನಂ 1902 ಕರೆ ಮಾಡಬಹುದು. ಇಲ್ಲವೇ 8147500500 ಈ ಸಂಖ್ಯೆಗೆ ಸಂದೇಶ ಕಳುಹಿಸಿದರೆ ನಿಮ್ಮ ನೆರವಿಗೆ ಸಿಬ್ಬಂದಿ ಬರುತ್ತಾರೆ ಎಂದರು.
ತಾಪಂ ಇಒ ವೈ.ಎಚ್.ಚಂದ್ರಶೇಖರ್ ಮಾತನಾಡಿ, ಗ್ರಾಪಂ ಪಿಡಿಒಗಳು ವಿಡಿಯೋ ಸಂವಾದ ಮೂಲಕ ಗ್ರಾಪಂ ಮಟ್ಟದಲ್ಲಿ ಫಲಾನುಭವಿಗಳಿಗೆ ಮುಟ್ಟುವಂತೆ ಮಾಡಲೇ ಬೇಕು. ಸ್ಥಳೀಯವಾಗಿ ಭವನಗಳು ಇದ್ದಲ್ಲಿ ಅಲ್ಲಿಯೇ ಕಾರ್ಯಕ್ರಮ ಮಾಡಿ.
ಇಲ್ಲವಾದರೆ ಶಾಮಿಯಾನ ಹಾಕಿಸಿ. ಲಘು ಉಪಹಾರ ವ್ಯವಸ್ಥೆ ಮಾಡಬೇಕು. ಅದಕ್ಕೆ ಸರಕಾರದಿಂದ ವಿಶೇಷ ಅನುದಾನ ನೀಡುವುದಿಲ್ಲ. ಗ್ರಾಪಂ ಮಟ್ಟದಲ್ಲಿ ಗೃಹ ಲಕ್ಷ್ಮೀ ಯೋಜನೆಗೆ ಶೇ.70 ರಷ್ಟು ಫಲಾನುಭವಿಗಳು ಇದ್ದಾರೆ.
ಅವರಿಗೆ ಕಾರ್ಯಕ್ರಮದ ನೇರ ಪ್ರಸಾರವನ್ನು ಮುಟ್ಟಿಸುವ ಜವಾಬ್ದಾರಿ ನೋಡಲ್ ಅಧಿಕಾರಿಗಳು ಮತ್ತು ಪಿಡಿಒಗಳ ಮೇಲಿದೆ ಎಂದರು.
ಸಭೆಯಲ್ಲಿ ಸಿಡಿಪಿಒ ಬೀರೇಂದ್ರ ಕುಮಾರ್ ಆಯಾ ಗ್ರಾಪಂಗಳ ನೋಡಲ್ ಅಧಿಕಾರಿಗಳು ಮತ್ತು ಪಿಡಿಒಗಳನ್ನು ನಿಯೋಜನೆ ಮಾಡಿರುವ ಪಟ್ಟಿಯನ್ನು ಮಂಡಿಸಿದರು. ಈ ವೇಳೆ ಗ್ರೇಡ್-2 ತಹಶೀಲ್ದಾರ್ ಮಂಜಾನಂದ, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ಶಾಂತಮ್ಮ ಸೇರಿದಂತೆ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.